ಮುಂಬಯಿ (ಆರ್ಬಿಐ) ಉಜಿರೆ, ಆ.31: ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾಭವನದಲ್ಲಿ ಸೋಮವಾರ ಬೆಳಗ್ಗೆ ತುಲಾ ಲಗ್ನ ಸುಮುಹೂರ್ತದಲ್ಲಿ ಆನೆಮರಿಗೆ `ಶಿವಾನಿ' ಎಂದು ನಾಮಕರಣ ಮಾಡಲಾಯಿತು.
ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರು ಆನೆ ಮರಿಗೆ ಪ್ರಸಾದ ಹಾಕಿ, ಗಂಟೆ ಕಟ್ಟಿದ ಬಳಿಕ ನಾಮಕರಣ ಶಾಸ್ತ್ರ ನಡೆಸಲಾಯಿತು. ಹೆಗ್ಗಡೆಯವರ ಮೊಮ್ಮಗಳು ಮಾನ್ಯ `ಶಿವಾನಿ' ಹೆಸರನ್ನು ಪ್ರಕಟಿಸುವ ಮೂಲಕ ಆನೆ ಮರಿಗೆ ನಾಮಕರಣ ಮಾಡಲಾಯಿತು. ಬಳಿಕ ಡಿ.ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಧರ್ಮಸ್ಥಳದಲ್ಲಿ ಜಾತ್ರೆ, ಉತ್ಸವ ಮೆರವಣಿಗೆ ಮೊದಲಾದ ವಿಶೇಷ ಸಂದರ್ಭಗಳಲ್ಲಿ ಗಜ ಸೇವೆಯನ್ನು ಬಳಸುವುದು ಸಂಪ್ರದಾಯವಾಗಿದೆ.
ಈಗಾಗಲೇ ಲತಾ ಮತ್ತು ಲಕ್ಷಿ ್ಮ ಎಂಬ ಎರಡು ಆನೆಗಳಿದ್ದು, 2020 ರ ಜುಲೈ 1ರಂದು ಬುಧವಾರ ಲಕ್ಷ್ಮಿ ಆನೆ ಹೆಣ್ಣು ಮರಿಗೆ ಜನ್ಮ ನೀಡಿದೆ. ಶಿವನ ಸನ್ನಿಧಿಯ ಆಶ್ರಯದಲ್ಲಿ ಇರುವುದರಿಂದ ಅದಕ್ಕೆ `ಶಿವಾನಿ' ಎಂದು ನಾಮಕರಣ ಮಾಡಲಾಗಿದೆ. ಧರ್ಮಸ್ಥಳದಲ್ಲಿರುವ ಆನೆಗಳಿಗೆ ವನ ಸಂಚಾರಕ್ಕೂ ಅವಕಾಶವಿದ್ದು, ಪ್ರಾಕೃತಿಕವಾಗಿ ದೊರಕುವ ಸೊಪ್ಪು, ಹಣ್ಣುಹಂಪಲುಗಳನ್ನು ನೀಡಲಾಗುತ್ತದೆ ಎಂದು ಹೇಳಿದರು. ಧರ್ಮಸ್ಥಳದ ಇತಿಹಾಸದಲ್ಲಿ ಗಜಪ್ರಸವ ಹಾಗೂ ನಾಮಕರಣ ನೂತನ ಕಾರ್ಯಕ್ರಮವಾಗಿದೆ. ಬಳಿಕ `ಶಿವಾನಿ' ನೀರಾಟದ ತುಂಟಾಟ ಪ್ರೇಕ್ಷಕರ ಕಣ್ಮನ ಸೆಳೆಯಿತು.
ಹೇಮಾವತಿ ವಿ.ಹೆಗ್ಗಡೆ, ಡಿ.ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಡಾ| ಬಿ.ಯಶೋವರ್ಮ, ಶ್ರದ್ದಾ ಅಮಿತ್, ಮಾಣಿಲದ ಮೋಹನದಾಸ ಸ್ವಾಮೀಜಿ ಉಪಸ್ಥಿತರಿದ್ದರು.