ಮುಂಬಯಿ (ಆರ್ಬಿಐ), ಸೆ.04: ಉಡುಪಿ ಮೂಡನಿಂಡಬೂರು ಮೂಲತಃ ಮುಂಬಯಿವಾಸಿ ಅಂತರಾಷ್ಟ್ರೀಯ ಚಿತ್ರಕಲಾವಿದ, ದಿವಾಕರ ರಾಮ ಶೆಟ್ಟಿ (63.) ಇಂದಿಲ್ಲಿ ಶುಕ್ರವಾರ ಮುಂಜಾನೆ ಅಲ್ಪಕಾಲದ ಅಸೌಖ್ಯದಿಂದ ಮಹಾನಗರದ ಚಾರ್ಕೋಪ್ ಅಲ್ಲಿನ ಸ್ವಗೃಹದಲ್ಲಿ ನಿಧನರಾದರು.
ಮರದ ಉಬ್ಬುಶಿಲ್ಪಗಳ ವಿಶಿಷ್ಟ ಕಲಾ ರಚನೆಗಳಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಪುರಸ್ಕೃತರಾಗಿ ತನ್ನ ಗಣೇಶ ಸರಣಿ, ಸೂರ್ಯ ಸರಣಿ, ಅಶ್ವ ಸರಣಿ, ಹಂಸ ಸರಣಿ ಇತ್ಯಾದಿ ರಚನೆಗಳಿಂದ ಪ್ರಸಿದ್ಧÀರೆಣಿಸಿ `ಮೆಟಲ್ ಮ್ಯಾನ್ ಆಫ್ ಇಂಡಿಯಾ' ಬಿರುದಾಂಕಿತ ದಿವಾಕರ ಶೆಟ್ಟಿ ಇತ್ತೀಚಿನ ವರ್ಷಗಳಲ್ಲಿ ಮರದ ಉಬ್ಬುಶಿಲ್ಪದ ಸಂಶೋಧನಾತ್ಮಕ ರಚನೆಗಳನ್ನು ಕೈಗೊಂಡಿದ್ದರು. ಎಂಬತ್ತರ ದಶಕದಲ್ಲಿ ಉಡುಪಿಯಿಂದ ಮುಂಬಯಿಗೆ ಬಂದಿರುವ ಆಗಮಿಸಿ ಆರಂಭದಲ್ಲಿ ಬ್ಯಾಂಕ್ ಉದ್ಯೋಗಿಯಾಗಿ ಬಳಿಕ ಪೂರ್ಣಕಾಲಿಕ ಚಿತ್ರಕಲಾ ರಚನೆಗಳಲ್ಲಿ ತಮ್ಮನ್ನು ತೊಡಗಿಸಿ ಕೊಂಡಿದ್ದರು. ಇವರನ್ನು `ದಾರ್ಶನಿಕ ಚಿತ್ರಕಲಾವಿದ' ಎಂದೂ ಕರೆಯುತ್ತಿದ್ದರು.
ಐದು ವರ್ಷಗಳ ಹಿಂದೆ ಪಂಚಮಹಾಭೂತಗಳ ತತ್ವಗಳಡಿ ಕಲಾ ರಚನೆ ಮಾಡಿದ್ದು, ಕಳೆದ ವರ್ಷದಿಂದ `ಶಿವಶಕ್ತಿ ಸರಣಿ'ಯ ಹೊಸ ಕಲಾರಚನೆಗಳನ್ನು ಮೂಲಕ ಗಮನಸೆಳೆದಿದ್ದರು. ದೇಶವಿದೇಶಗಳಲ್ಲಿ ಇವರು ತಮ್ಮ ಕಲಾ ಪ್ರದರ್ಶನಗಳನ್ನು ನಡೆಸಿ ಪ್ರಶಂಸೆ, ಪ್ರಶಸ್ತಿ ಪಡೆದಿರುವರು. 2015ರಲ್ಲಿ ಕರ್ನಾಟಕ ಸಂಘ ಮುಂಬಯಿ ಇವರಿಗೆ `ಸಾಧನಾ ಶಿಖರ ಪ್ರಶಸ್ತಿ' ಪ್ರದಾನಿಸಿ ಹಾಗೂ ಇತ್ತೀಚೆಗಷ್ಟೇ ಮುಂಬಯಿ ವಿವಿ ಕನ್ನಡದ ವಿಭಾಗವು ಸ್ವರ್ಣಪದಕವನ್ನಿತ್ತು ಗೌರವಿಸಿತ್ತು.
ಮೃತರು ಪತ್ನಿ, ಇಬ್ಬರು ಪುತ್ರರ ಸಹಿತ ಅಪಾರ ಬಂಧು-ಬಳಗ ಅಭಿಮಾನಿಗಳನ್ನು ಆಗಲಿದ್ದು, ದಿವಾಕರ್ ಶೆಟ್ಟಿ ನಿಧನಕ್ಕೆ ಮುಂಬಯಿ ವಿವಿ ಕನ್ನಡದ ವಿಭಾಗದ ಮುಖ್ಯಸ್ಥ ಡಾ| ಜಿ.ಎನ್ ಉಪಾಧ್ಯ, ಡಾ| ಪೂರ್ಣಿಮಾ ಎಸ್.ಶೆಟ್ಟಿ, ಹಿರಿಯ ರಂಗ ಕಲಾವಿದ ಮೋಹನ್ ಮಾರ್ನಾಡ್, ಕರ್ನಾಟಕ ಸಂಘ ಮುಂಬಯಿ ಇದರ ಪದಾಧಿಕಾರಿಗಳು, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಜೊತೆ ಕಾರ್ಯದರ್ಶಿ ಜಯರಾಮ ಎನ್.ಶೆಟ್ಟಿ (ಯಶಸ್ವಿ ವ್ಯಕ್ತಿ) ಮತ್ತಿತರ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.