ಮುಂಬಯಿ (ಆರ್ಬಿಐ) ಬಂಟ್ವಾಳ, ಸೆ.06: ತುಂಬೆ ಗ್ರಾಮದ ಮಾಣೂರು ಇರ್ಷಾದುಲ್ ಇಸ್ಲಾಂ ಮದರಸ ಆಯೋಜಿಸಿದ ಉಚಿತ ಆಯುಷ್ಮಾಣ್ ಕಾರ್ಡ್ ನೋಂದಾವಣೆ ಶಿಬಿರದಲ್ಲಿ 176 ಫಲಾನುಭವಿಗಳು ಪ್ರಯೋಜನ ಪಡೆದರು. ಈ ಸಂದರ್ಭದಲ್ಲಿ ಬಿ.ಸಿ ರೋಡ್ ಲೈಫ್ಲೈನ್ ಹೆಲ್ತ್ ಕೇರ್ ಪ್ಲಸ್ ಮತ್ತು ಪಾಲಿಕ್ಲಿನಿಕ್ ಐಡಿಯಲ್ ಲ್ಯಾಬ್ ವತಿಯಿಂದ ರಕ್ತದ ಗುಂಪು ವರ್ಗೀಕರಣ ಕಾರ್ಯಕ್ರಮ ಕೂಡಾ ನಡೆಯಿತು.
ಹಿದಾಯ ಫೌಂಡೇಶನ್ ಮತ್ತು ಎಂ.ಫ್ರೆಂಡ್ಸ್ ಮಂಗಳೂರು ಸಹಯೋಗದೊಂದಿಗೆ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಇರ್ಷಾದುಲ್ ಇಸ್ಲಾಂ ಮದರಸ ಅಧ್ಯಕ್ಷ ಎಂ.ಹೆಚ್ ಹಸನಬ್ಬ ವಹಿಸಿದ್ದು, ಮಂಗಳೂರು ಹಿದಾಯ ಫೌಂಡೇಶನ್ ಮತ್ತು ಎಂ.ಫ್ರೆಂಡ್ಸ್ ಅಧ್ಯಕ್ಷ ಹನೀಫ್ ಹಾಜಿ ಗೋಳ್ತಮಜಲು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಹಸನಬ್ಬ ಮಾತನಾಡಿ ಜಾತಿ, ಮತ, ಭೇದ ನೋಡದೆ ಸರ್ಕಾರದ ಎಲ್ಲಾ ಸವಲತ್ತುಗಳನ್ನು ಫಲಾನುಭವಿಗಳ ಮನೆ ಬಾಗಿಲಿಗೆ ತಲುಪಿಸುವಂತಹಾ ಕೆಲಸಗಳು ನಿರಂತರವಾಗಿ ನಡೆಯಬೇಕು ಎಂದು ಕರೆಯಿತ್ತರು.
ತುಂಬೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಮಹಮ್ಮದ್ ವಳವೂರು, ನವೀನ್ಚಂದ್ರ ಶೆಟ್ಟಿ, ಜ್ಯೋತೀಂದ್ರ ಶೆಟ್ಟಿ, ಎಂ.ಫ್ರೆಂಡ್ಸ್ ಕಾರ್ಯದರ್ಶಿ ರಶೀದ್ ವಿಟ್ಲ, ಅಬೂಬಕ್ಕರ್ ಮುಸ್ಲಿಯಾರ್ ಕುಕ್ಕಾಜೆ, ಉಮರಬ್ಬ ತುಂಬೆ, ಎಂ.ಫ್ರೆಂಡ್ಸ್ ಸದಸ್ಯರಾದ ಸಿದ್ದೀಕ್ ಕೆಲಿಂಜ, ಹಾರಿಸ್ ಕಾನತ್ತಡ್ಕ, ಲೈಫ್ ಲೈನ್ ಹೆಲ್ತ್ ಕೇರ್ ಪ್ಲಸ್ ಮತ್ತು ಪಾಲಿಕ್ಲಿನಿಕ್ ಐಡಿಯಲ್ ಲ್ಯಾಬ್ನ ನಳಿನಿ, ಮುಕ್ತಾರ್ ಫರಂಗಿಪೇಟೆ ಮತ್ತಿತರರು ಉಪಸ್ಥಿತರಿದ್ದರು.
ಶಿಬಿರದಲ್ಲಿ ನೊಂದಣಿ ಮಾಡಿರುವ ಆಯುಷ್ಮಾನ್ ಕಾರ್ಡ್ ಸೆಪ್ಟೆಂಬರ್ 10 ರಂದು ಎಂ.ಎಚ್.ಹಸನಬ್ಬ ಅವರ ಮಾಣೂರು ಬೀಡಿ ಬ್ರಾಂಚ್ ನಲ್ಲಿ ವಿತರಿಸಲಾಗುವುದು ಎಂದು ಆಯೋಜಕರು ತಿಳಿಸಿದ್ದು, ಆಯುಷ್ಮಾನ್ ಭಾರತ್ ಕುರಿತು ಮುಸ್ತಫಾ ಕುಕ್ಕಾಜೆ ಮಾಹಿತಿ ನೀಡಿದರು. ಆಶಿಕ್ ಕುಕ್ಕಾಜೆ ಸ್ವಾಗತಿಸಿ ವಂದಿಸಿದರು.