ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕಿನ್ನಿಗೋಳಿ ವಲಯ ಇದರ ವತಿಯಿಂದ ಗುತ್ತಕಾಡು ಶಾಂತಿನಗರ ಕೆಜೆಎಂ ಸಭಾಂಗಣದಲ್ಲಿ ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ ನೋಂದಣಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನ ದುವಾ ಆಶೀರ್ವಚನದ ಮೂಲಕ ಖಿಲ್ರಿಯಾ ಜುಮ್ಮಾ ಮಸೀದಿ ಖತೀಬರು ಉಮರುಲ್ ಫಾರೂಖ್ ಸಖಾಫಿ ನೆರವೇರಿಸಿದರು.
ಈ ಸಂದರ್ಭ ಮಾತನಾಡಿದ ಅವರು, ಸರಕಾರದ ಯೋಜನೆಗಳು ಬಡಜನರನ್ನ ತಲುಪುತ್ತಿಲ್ಲ. ಇಂತಹ ಸಂದರ್ಭದಲ್ಲಿ ಯೋಜನೆಗಳನ್ನ ತಲುಪಿಸಲು ರಾಜಕೀಯ ಪಕ್ಷ, ಸಂಘಟನೆ, ಸಂಘ-ಸಂಸ್ಥೆಗಳು ಮುಂದಾಗುತ್ತಿರುವುದು ಅಭಿನಂದನಾರ್ಹ ವಿಚಾರ. ಆರೋಗ್ಯ ಸಂಬಂಧಿತ ಮಾತ್ರವಲ್ಲದೇ ಇನ್ನಿತರ ಯೋಜನೆಗಳನ್ನೂ ತಲುಪಿಸುವ ಕೆಲಸ ಆಗಬೇಕಿದೆ. ಪ್ರತಿ ವರ್ಗಕ್ಕೂ ಸರಕಾರದ ಯೊಜನೆಗಳು ತಲುಪುವಂತಾದರೆ ಸಮಾಜದ ಕಟ್ಟಕಡೆಯ ವ್ಯಕ್ತಿಯು ನೆಮ್ಮದಿಯ ನಾಳೆಯನ್ನು ಕಾಣಲು ಸಹಕಾರಿಯಾದೀತು ಎಂದರು. ಇನ್ನು ಇದೇ ಸಂದರ್ಭ ಕಂಪ್ಯೂಟರ್ ವಲ್ರ್ಡ್ ಡಿಜಿಟಲ್ ಸೇವಾ ಕೇಂದ್ರ ಇದರ ಮಾಲಕ ಅಶೋಕ್ ಕಿನ್ನಿಗೋಳಿ ಕೇಂದ್ರ ಸರಕಾರದಿಂದ ಸಿಗುವ ಸವಲತ್ತುಗಳ ಬಗ್ಗೆ ಸವಿವರವಾಗಿ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಎಸ್ಡಿಪಿಐ ಮುಲ್ಕಿ-ಮೂಡಬಿದ್ರಿ ಕ್ಷೇತ್ರ ಅಧ್ಯಕ್ಷ ಆಸಿಫ್ ಕೋಟೆಬಾಗಿಲು, ಉಪಾಧ್ಯಕ್ಷ ಇಕ್ಬಾಲ್, ಎಸ್ಡಿಟಿಯು ಮುಲ್ಕಿ-ಮೂಡಬಿದ್ರಿ ಕ್ಷೇತ್ರ ಅಧ್ಯಕ್ಷ ಶರೀಫ್ ಕೊಲ್ನಾಡು, ಕಾರ್ಯದರ್ಶಿ ಹಾರಿಸ್, ಮತದಾರರ ಪಟ್ಟಿ ನೋಂದಣಿ ಮೇಲ್ವಿಚಾರಕಿ ಶಶಿಕಲಾ, ಪಿಎಫ್ಐ ಮುಲ್ಕಿ ವಲಯಾಧ್ಯಕ್ಷ ಶಫಿಕ್ ಗುತ್ತಕಾಡು, ಶಾಂತಿನಗರ ಖಿಲ್ರಿಯಾ ಜುಮ್ಮಾ ಮಸೀದಿ ಅಧ್ಯಕ್ಷ ಹಸನಬ್ಬ, ಖಿಲ್ರಿಯಾ ಆಂಗ್ಲ ಮಾಧ್ಯಮ ಪಬ್ಲಿಕ್ ಸ್ಕೂಲ್ ಸಂಚಾಲಕ ಟಿಕೆ ಖಾದರ್ ಉಪಸ್ಥಿತರಿದ್ದರು. ಜಲೀಲ್ ಗುತ್ತಕಾಡು ನಿರೂಪಿಸಿ, ಸ್ವಾಗತಿಸಿದರು. ಇಬ್ರಾಹಿಂ ವಂದಿಸಿದರು. ಸುಮಾರು 400ಕ್ಕೂ ಅಧಿಕ ಮಂದಿ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ಗಾಗಿ ನೋಂದಣಿ ಮಾಡಿಕೊಂಡರು.