ಮುಂಬಯಿ (ಆರ್ಬಿಐ), ನ.28: ಮಹಾನಗರದಲ್ಲಿನ ಹೆಸರಾಂತ ಧಾರ್ಮಿಕ ಮತ್ತು ಸಾಮಾಜಿಕ ಸಂಸ್ಥೆ ಶ್ರೀಕೃಷ್ಣ ವಿಠ್ಠಲ ಪ್ರತಿಷ್ಠಾನದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ, ಬಿಎಸ್ಕೆಬಿ ಅಸೋಸಿಯೇಶನ್ (ಗೋಕುಲ) ಸಾಯನ್ ಮುಂಬಯಿ ಇದರ ಸಕ್ರೀಯ ಕಾರ್ಯಕರ್ತೆ, ಶ್ರೀ ಪೇಜಾವರ ಮಠ ಮುಂಬಯಿ ಇದರ ಮಧ್ವೇಶ ಭಜನಾ ಮಂಡಳಿ ಸಾಂತಕ್ರೂಜ್ ಇದರ ಮುಖ್ಯಸ್ಥೆ ಸುನಂದಾ ಸದಾನಂದ ಉಪಾಧ್ಯಾಯ (78.) ಕಳೆದ ಶುಕ್ರವಾರ ಅಂಧೇರಿ ಪೂರ್ವದ ಖಾಸಾಗಿ ಆಸ್ಪತ್ರೆಯಲ್ಲಿ ಅಲ್ಪಕಾಲದ ಅಸ್ವಸ್ಥತೆಯಿಂದ ನಿದನರಾದರು.
ಮಹಾನಗರದಲ್ಲಿನ ಅನೇಕನೇಕ ಸಂಸ್ಥೆಗಳಲ್ಲೂ ಸಕ್ರೀಯರಾಗಿ ಶ್ರಮಿಸುತ್ತಿದ್ದ ಸುನಂದಾ ಸದಾ ಹಸನ್ಮುಖಿಯಾಗಿದ್ದು ಹಿರಿಕಿರಿಯರೆಲ್ಲರಲ್ಲೂ ಒಡನಾಟವನ್ನಿರಿಸಿ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು.
ಉಡುಪಿ ಜಿಲ್ಲೆಯ ಕಾಟಿಪಳ್ಳ ಶಿಬರೂರು ಇಲ್ಲಿನ ಕುಲ್ಲಂಗಲ್ ಮೂಲತಃ ಸುನಂದಾ ಮೈಸೂರುನಲ್ಲಿ ಬೆಳೆದವರು. ನಂತರ ಮುಂಬಯಿ ಸೇರಿದ್ದು, ಅವಿರತ ಪರಿಶ್ರಮದಿಂದ ಸುಸಂಸ್ಕೃತ ಸಭ್ಯ, ಸದೃಹಸ್ಥೆಯಾಗಿ ಜೀವನ ರೂಪಿಸಿ, ಸಹೃದಯಿ, ಕೊಡುಗೈದಾನಿ ಎಣಿಸಿ ಇತರರಿಗೂ ಮಾದರಿ ಗೃಹಸ್ಥೆಯಾಗಿ ಅನೇಕ ಸಾಮಾಜಿಕ, ಶೈಕ್ಷಣಿಕ ಮತ್ತು ಧಾರ್ಮಿಕ ಕ್ಷೇತ್ರಗಳ ಬಗ್ಗೆ ಕಾಳಜಿ ವಹಿಸಿ ಸಮಾಜದ ಏಳಿಗೆಗಾಗಿ ನಿಷ್ಠಾವಂತರಾಗಿ ಶ್ರಮಿಸಿದ್ದÀರು. ಮೃತರು ಓರ್ವ ಸುಪುತ್ರ ಸೇರಿದಂತೆ ಬಂಧು-ಬಳಗ ಅಗಲಿದ್ದಾರೆ.
ಸುನಂದಾ ಉಪಾಧ್ಯಾಯ ನಿಧನಕ್ಕೆ ಶ್ರೀ ಕೃಷ್ಣ ವಿಠ್ಠಲ ಪ್ರತಿಷ್ಠಾನದ ಸ್ಥಾಪಕಧ್ಯಕ್ಷ ವಿದ್ವಾನ್ ಕೈರಬೆಟ್ಟು ವಿಶ್ವನಾಥ ಭಟ್, ಕಾರ್ಯದರ್ಶಿ ಸುಮ ವಿ.ಭಟ್, ಬಿಎಸ್ಕೆಬಿ ಅಸೋಸಿಯೇಶನ್ನ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು, ಮಹಿಳಾ ವಿಭಾಗಧ್ಯಕ್ಷೆ ಪ್ರೇಮಾ ಬಿ.ರಾವ್, ಉದ್ಯಮಿಗಳಾದ ಡಾ| ವಿರಾರ್ ಶಂಕರ್ ಶೆಟ್ಟಿ, ಬಿ.ಆರ್ ರಾವ್ ಕಲೀನಾ, ಶ್ರೀ ಪೇಜಾವರ ಮಠ ಮುಂಬಯಿ ಶಾಖೆಯ ವಿದ್ವಾನ್ ಪ್ರಕಾಶ ಆಚಾರ್ಯ ರಾಮಕುಂಜ, ಡಾ| ರಾಮದಾಸ ಉಪಾಧ್ಯಾಯ ರೆಂಜಾಳ ಸೇರಿದಂತೆ ನೂರಾರು ಗಣ್ಯರು ಸಂತಾಪ ಸೂಚಿಸಿದ್ದಾರೆ.