ಸಮ್ಮೇಳನ ಅಧ್ಯಕ್ಷರಾಗಿ ಬಾಬು ಶಿವ ಪೂಜಾರಿ ಬಾರ್ಕುರು (ಮುಂಬಯಿ) ಆಯ್ಕೆ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಜ.22: ಕನ್ನಡ ನಾಡು ನುಡಿ ಸಂಸ್ಕøತಿ, ಪರಂಪರೆಯನ್ನು ಪ್ರತಿಬಿಂಬಿಸುವ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ ಇಲ್ಲಿನ ಬ್ರಹ್ಮಾವರ ತಾಲೂಕು ಘಟಕದ ಸಾರಥ್ಯದಲ್ಲಿ ಬ್ರಹ್ಮಾವರ ತಾಲೂಕು ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನ ಇದೇ ಜ.24ನೇ ಭಾನುವಾರ ಯಡ್ತಾಡಿ ಗ್ರಾಮದ ಸಾೈಬ್ರಕಟ್ಟೆ ಮಹಾತ್ಮ ಗಾಂಧಿ ಪ್ರೌಢಶಾಲೆಯ ಆವಾರಣದಲ್ಲಿ ವಿವಿಧ ಸಂಘ ಸಂಸ್ಥೆಗಳ ಮತ್ತು ಊರಿನಗಣ್ಯರ ಸಹಯೋಗದಿಂದ ನೆರವೇರಲಿದ್ದು ಸಮ್ಮೇಳನ ಅಧ್ಯಕ್ಷರಾಗಿ ಹಿರಿಯ ಸಾಹಿತಿ, ಸಂಶೋಧಕರು, ಪತ್ರಕರ್ತ ಬಾಬು ಶಿವ ಪೂಜಾರಿ ಬಾರ್ಕೂರು (ಮುಂಬಯಿ) ಇವರನ್ನು ಆಯ್ಕೆ ಗೊಳಿಸಲಾಗಿದೆ.
`ಹಗ್ಗಿನ ಹನಿ-2021 ಗುರುತಿನ ಅನುಸಂಧಾನ'ದೊಂದಿಗೆ ಜರುಗುವ ಸಮ್ಮೇಳನವನ್ನು ಸಾಂಸ್ಕೃತಿಕ ಚಿಂತಕ ಇಬ್ರಾಹಿಂ ಸಾಹೇಬ್ ಅಂಗಾರಕಟ್ಟೆ ಉದ್ಘಾಟಿಸಲಿದ್ದು ಉಡುಪಿ ಸಂಸದೆ ಶೋಭಾ ಕರಂದ್ಲಾಜೆ, ಮುಜರಾಯಿ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿನಿವಾಸ ಪೂಜಾರಿ, ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಉಡುಪಿ ಶಾಸಕ ಕೆ.ರಘುಪತಿ ಭಟ್ ಮತ್ತಿತರ ಗಣ್ಯರು ಅತಿಥಿü ಅಭ್ಯಾಗತರುಗಳಾಗಿ ಭಾಗವಹಿಸಲಿದ್ದಾರೆ ಎಂದು ಕ.ಸ.ಪ ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ನರೇಂದ್ರ ಕುಮಾರ್ ಕೋಟಿ ತಿಳಿಸಿದ್ದಾರೆ.
ಸಮ್ಮೇಳನವು ಬೆಳಿಗ್ಗೆಯಿಂದ ರಾತ್ರಿ ತನಕ ಏಕದಿನವಾಗಿ ನಡೆಯಲಿದ್ದು ವಿವಿಧ ಗೋಷ್ಠಿ, ವಿಚಾರ ಮಂಡನೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಬ್ರಹ್ಮಾವರ ತಾಲೂಕು ಘಟಕದ ಅಧ್ಯಕ್ಷ ಸೂರಾಲು ನಾರಾಯಣ ಮಡಿ ಕಾರ್ಯದರ್ಶಿ ಮತ್ತು ಹೆಚ್.ಮೋಹನ್ ಉಡುಪ ತಿಳಿಸಿದ್ದಾರೆ.
ಬಾಬು ಶಿವ ಪೂಜಾರಿ ಬಾರ್ಕೂರು (ಮುಂಬಯಿ):
`ಬಿಲ್ಲವರು ಒಂದು ಅಧ್ಯಯನ', ಶ್ರೀ ನಾರಾಯಣ ಗುರು ವಿಜಯ ದರ್ಶನ, ಹಗ್ಗಿನ ಹನಿ ಇತ್ಯಾದಿ ಪುಸ್ತಕಗಳ ಮೂಲಕ ಪ್ರಸಿದ್ಧರಾಗಿರುವ ಅವರು ಕೃಷ್ಣ ದೇವರಾಯ, ಕೋಟಿ ಚೆನ್ನಯ, ತುಳು ಸಂಸ್ಕೃತಿ, ಕಾಂತಾಬಾರೆ ಬೂದಾಬಾರೆ, ಸಿರಿ, ನಾಗಾರಾಧನೆ, ಭೂತಾರಾಧನೆ, ಮತ್ತು ತುಳುನಾಡಿನ ಗರಡಿಗಳು ಮೊದಲಾದುವುಗಳ ಬಗ್ಗೆ ಅಧ್ಯಯನಾತ್ಮಕ ಮತ್ತು ಸಂಶೋಧನಾತ್ಮಕ ಪ್ರೌಢ ಲೇಖನಗಳನ್ನು ಪ್ರಕಟಿಸಿದ್ದಾರೆ. ನಾರಾಯಣ ಗುರು ವಿಜಯ ದರ್ಶನವು ಆಧ್ಯಾತ್ಮ ಮತ್ತು ಸಾಮಾಜಿಕ ನೆಲೆಯಲ್ಲಿ ಮಹತ್ತರವಾದ ವಿಚಾರಗಳ ಬಗ್ಗೆ ಅರಿವು ಮೂಡಿಸಿದ ಮೌಲ್ಯಯುತವಾದ ಕೃತಿ. ಇವರು ವೇದ, ಆಧುನಿಕ ಸಾಹಿತ್ಯ, ಭೌದ್ಧ, ಜೈನ, ಇಸ್ಲಾಂ, ಮತ್ತು ಕ್ರಿಶ್ಚಿಯನ್ ಧರ್ಮ ಗ್ರಂಥಗಳನ್ನು ಆಳವಾಗಿ ಅಧ್ಯಯನ ಮಾಡಿರುವರು.
ವೃತ್ತಿಯಲ್ಲಿ ಹೋಟೇಲು ಉದ್ಯಮಿಯಾಗಿದ್ದು ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯಲ್ಲಿ ಅಪಾರ ಅಭಿಮಾನ ಮತ್ತು ಆಸಕ್ತಿಯನ್ನು ಹೊಂದಿರುವರು. ಗುರುತು ಮಾಸಿಕದ ಸಂಪಾದಕರಾಗಿದ್ದ ಬಾಬು ಶಿವ ಪೂಜಾರಿ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ (ರಿ.) ಇದರ ಸದಸ್ಯರೂ ಆಗಿರುವರು.