ಮುಂಬಯಿ (ಆರ್ಬಿಐ), ಫೆ.26: ಕಾರ್ಕಳ ಹಿರ್ಗಾನದಲ್ಲಿ ಮೊದಲ ಬಾರಿಗೆ ಸಾಹಿತ್ಯ ಸಮ್ಮೇಳನ ನಡೆಯುತ್ತಿ ದ್ದು, ಅದನ್ನು ಬಹಳ ಚೆನ್ನಾಗಿ ನಡೆಸಿಕೊಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಚಂದಗಾಣಿಸಿ ಕೊಡಬೇಕೆಂದು ಶ್ರೀ ಆದಿಲಕ್ಷ್ಮೀ ಮಹಾಲಕ್ಷ್ಮಿ ದೇವಾಲಯದ ಆಡಳಿತ ಮೊಕ್ತೇಸರ ಅಶೋಕ್ ನಾಯಕ್ ಹೇಳಿದರು.
ಫೆ.28ರಂದು ನಡೆಯುವ ಕರ್ನಾಟಕ ಯುವ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆಯನ್ನು ಇಂದಿಲ್ಲಿ ಹಿರ್ಗಾನ ಬಿಎಂ ಅನುದಾನಿತ ಶಾಲೆಯಲ್ಲಿ ಬಿಡುಗಡೆ ಮಾಡಿ ನಾಯಕ್ ತಿಳಿಸಿದರು.
ಸಮ್ಮೇಳನ ಸಂಘಟಕ ಡಾ| ಶೇಖರ ಅಜೆಕಾರು ಮಾತನಾಡಿ ಆದಿಗ್ರಾಮೋತ್ಸವ ಸಮಿತಿ, ಅಖಿಲ ಕರ್ನಾಟಕ ಬೆಲದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ, ಲಯನ್ಸ್ ಕ್ಲಬ್ ಮುನಿಯಾಲು ಮತ್ತು ಸರ್ವರ ಸಹಕಾರದೊಂದಿಗೆ ಈ ಸಮ್ಮೇಳನ ಆಯೋಜಿತವಾಗಿದೆ. ಸಮ್ಮೇಳನದ ಚರ್ಚಾ ಕಾರ್ಯಕ್ರಮದಲ್ಲಿ ಸುಮಾರು 30 ಮಂದಿ ಹಿರಿಯರು ತಮ್ಮ ಅನುಭವ ಹಂಚಿ ಕೊಳ್ಳಲಿರುವರು. ಅವರಿಗೆ ಭಾರತ ಸಾಧನಾ ಗೌರವ ನೀಡಿ ಸನ್ಮಾನಿಸಲಾಗುತ್ತಿದೆ ಹಾಗೂ ಲೋಕನಾಥ ಜೈನ್ ಮತ್ತು ಸುಜಯ ಎಲ್.ಜೈನ್ ದಂಪತಿ ಮುಂಬಯಿ ಮತ್ತು ವಿ.ಬಿ ಕುಳಮರ್ವ ಮತ್ತು ಲಲಿತಾಲಕ್ಷ್ಮೀ ದಂಪತಿ ಕಾಸರಗೋಡುನ ಇವರುಗಳ ಹೊರನಾಡÀ ಶೈಕ್ಷಣಿಕ ಸೇವೆಗಾಗಿ ಗೌರವಿಸಲಾಗುತ್ತಿದೆ ಎಂದರು.
ಕನ್ನಡ ಸಂಘ ಕಾಂತಾವರ, ಪಂಚಮಿ ಚಾರಿಟೇಬಲ್ ಟ್ರಸ್ಟ್ ದೊಂಡೆರಂಗಡಿ, ಡಾ| ಜಿ.ಶಂಕರ್ ಸರ್ಕಾರಿ ಮಹಿಳಾ ಪದವಿ ಮತ್ತು ಸ್ನಾತಕೋತ್ತರ ಕೇಂದ್ರ ಅಜ್ಜರಕಾಡು ಉಡುಪಿ, ಶಾಂತಿ ನಿಕೇತನ ಯುವ ವೃಂದ ಕುಚ್ಚೂರು ಮತ್ತು ಫ್ರೆಂಡ್ಸ್ ಸರ್ಕಲ್ (ರಿ.) ಮೀನು ಮಾರುಕಟ್ಟೆ, ಕುಂದಾಪುರ ಈ ಸಂಸ್ಥೆಗಳು ಭಾರತ ಸಾಧನಾ ಸಂಘ ಸಿರಿ ಗೌರವಕ್ಕೆ ಪಾತ್ರವಾಗಲಿವೆ.
ಉದ್ಯಮಿ ಚೇತನ ಶೆಟ್ಟಿ ಕೊರಳ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಕೆ.ಪಿ.ಉದಯ ಕುಮಾರ್ ಶೆಟ್ಟಿ, ಮಹಿಳಾ ಸಾಧಕಿ ಕೆ.ಪಿ ಪದ್ಮಾವತಿ, ಮುಖ್ಯೋಪಾಧ್ಯಾಯಿನಿ ಆಶಾ ಕ್ಷೇರಾ ವಾಜ್, ಶಿಕ್ಷಕ ಅಣ್ಣಪ್ಪ ಮೊದಲಾದವರು ಉಪಸ್ಥಿತರಿದ್ದರು. ಅಣ್ಣಪ್ಪ ವಂದಿಸಿದರು.