ಶ್ರೀ ಉಮಾಮಹೇಶ್ವರಿ ಭಜನಾ ಮಂಡಳಿ ಜೆರಿಮೆರಿ ಮುಂಬಯಿ
ಮುಂಬಯಿ (ಆರ್ಬಿಐ), ಎ.01: ತಿರುಪತಿ ತಿರುಮಲ ಕ್ಷೇತ್ರದಲ್ಲಿ ದಾಸ ಸಾಹಿತ್ಯ ಯೋಜನೆ ಅಡಿಯಲ್ಲಿ ಇದೇ ಎ.5 ಮತ್ತು 6ನೇ ದಿನಾಂಕದಂದು ನಡೆಯುವ ನಿತ್ಯೋತ್ಸವ ಹಾಗೂ ಗರುಡೋತ್ಸವದ ಸಂದರ್ಭದಲ್ಲಿ ದ್ವಿದಿನಗಳ ಭಜನೆ ನಡೆಸುವ ಅವಕಾಶ ಈ ಬಾರಿಯೂ ಶ್ರೀ ಉಮಾಮಹೇಶ್ವರಿ ಭಜನಾ ಮಂಡಳಿ ಜೆರಿಮೆರಿ ಮುಂಬಯಿ ಇದಕ್ಕೆ ಶ್ರೀ ವೆಂಕಟೇಶ್ವರ ಸ್ವಾಮಿ ವಾರಿ ಟೆಂಪಲ್ ಸಮಿತಿ ಒದಗಿಸಿದೆ.
ಆ ಪ್ರಯುಕ್ತ ಸತತ 7ನೇ ವರ್ಷ ಶ್ರೀ ಉಮಾಮಹೇಶ್ವರಿ ಭಜನಾ ಮಂಡಳಿಯ 25 ಸದಸ್ಯರ ಭಜನಾ ತಂಡವು ಭುವಜಿ ಶ್ರೀ ರವೀಂದ್ರ ಶಾಂತಿ ಅವರ ನೇತೃತ್ವದಲ್ಲಿ ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಎರಡು ದಿನಗಳ ಹರಿನಾಮ ಸಂಕೀರ್ತನೆ ಯನ್ನು ನಡೆಸಲಿದ್ದಾರೆ.
ಮಂಡಳಿಯು ತಿರುಪತಿಗೆ ನಿರ್ಗಮಿಸಿದ್ದು ಶ್ರೀ ಉಮಾ ಮಹೇಶ್ವರಿ ದೇವಸ್ಥಾನದ ಟ್ರಸ್ಟಿ ಲಲಿತಾ ಬಿ.ಕೆ ಶೀನ, ಹಿರಿಯ ಮುತ್ಸದ್ಧಿ ಬಿ.ಎನ್ ಶೆಟ್ಟಿ ಶುಭ ಹಾರೈಸಿದ್ದು ದೇವಸ್ಥಾನದ ಪ್ರಧಾನ ಅರ್ಚಕ ಶ್ರೀ ಶ್ರೀನಿವಾಸ ಉಡುಪ ಆಶೀರ್ವಾದಿಸಿ ಬೀಳ್ಕೊಟ್ಟರು.