ಮುಂಬಯಿ (ಆರ್ಬಿಐ), ಮೇ.15: ಜನಸೇವೆ ಹಾಗೂ ತುಳುನಾಡ ಭಾಷೆ, ಸಂಸ್ಕೃತಿ ಪರ ಸಂಘಟನೆಗಳಲ್ಲಿ ಮುಂಚೂಣಿಯಲ್ಲಿ ಗುರುತಿಸಿ ಕೊಂಡಿರುವ ತುಳುನಾಡ ರಕ್ಷಣಾ ವೇದಿಕೆಯ ಅಂತರ್ರಾಷ್ಟ್ರೀಯ ಘಟಕದ ಗೌರವಾಧ್ಯಕ್ಷ ಡಾ| ಡೇವಿಡ್ ಫ್ರಾಂಕ್ ಫೆರ್ನಾಂಡಿಸ್ ದುಬಾಯಿ ಇವರ ಸಹಯೋಗದೊಂದಿಗೆ ರಕ್ಷಣಾ ವೇದಿಕೆಯ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಸಾರಥ್ಯದಲ್ಲಿ ಕೊರೋನಾ ಸಂಕಷ್ಟದ ಸಂಧಿಗ್ಧ ಪರಿಸ್ಥಿಯನ್ನು ಎದುರಿಸುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಕಡೆಗಳಲ್ಲಿ ಕಾರ್ಮಿಕರು, ನಿರಾಶ್ರಿತರಿಗೆ ಕಳೆದ 11 ದಿನಗಳಿಂದ ಪ್ರತಿದಿನ ಸುಮಾರು 450 ಆಹಾರ ಕಿಟ್ ವಿತರಿಸಲಾಯಿತು.
ಫ್ರಾಂಕ್ ಫೆರ್ನಾಂಡಿಸ್ ಮಾರ್ಗದರ್ಶನದಂತೆ ವಿವೇಕಾನಂದ ರಾವ್, ಸುಧಾಕರ್ ಆಳ್ವ, ಜೋಸೆಫ್ ಲೋಬೊ, ಪೇರಿ ಡಿಸೋಜಾ, ಗೈಟನ್, ರೋಶನ್, ಕ್ವೀಟಸ್ ಲೋಬೊ, ವಿವಿಯನ್, ಹರೀಶ್ ಶೆಟ್ಟಿ, ಶೋನ್ ಡಿಸೋಜಾ, ಶಿವಪ್ರಸಾದ್ ಪ್ರಶಾಂತ್ ಅಂಚನ್ ಮತ್ತಿತರ ತುರವೇ ಪದಾಧಿಕಾರಿಗಳು, ಸದಸ್ಯರು ಈ ಕಾಯಾದಲ್ಲಿ ಶ್ರಮಿಸಿ ಆಹಾರ ಕಿಟ್ ವಿತರಿಸಿದರು.
ಬಡ ಕುಟುಂಬಗಳಿಗೆ ಜಾತಿ, ಧರ್ಮ, ಪಂಥ, ಪಕ್ಷ ಕಾಣದೆ ಅಕ್ಕಿ, ಗೋಧಿ ಹಿಟ್ಟು, ಸಕ್ಕರೆ, ಕೊಲ್ಗೇಟ್ ಪೇಸ್ಟ್, ಚ್ಹಾಹುಡಿ, ನಿರುಳ್ಳಿ, ಬೆಳ್ಳುಳ್ಳಿ, ಸಾಸಿವೆ, ಜೀರಿಗೆ, ಎಣ್ಣೆ, ಬಟ್ಟೆ ಒಗೆಯುವ ಮತ್ತು ಸ್ನಾನದ ಸಾಬೂನು, ಮೆಣಸಿನ ಹುಡಿ, ಅರಸಿಣ ಹುಡಿ, ಟೊಮೆಟೊ ಸೇರಿದಂತೆ ದಿನಚರಿ ಪಡಿತರ ಸಾಮಗ್ರಿಗಳ ಕಿಟ್ಗಳಳನ್ನಾಗಿ ಮಾಡಲಾಗಿತ್ತು. ಈ ಬಾರಿ ಸುಮಾರು 360 ಪಡಿತರ ಕಿಟ್ ವಿತರಿಸಲಾಯಿತು.
ಕೊರೋನಾದ ಕಾಲದ ಲಾಕ್ಡೌನ್ ಕೊನೆಗೊಳ್ಳುವರೆಗೆ ಈ ಸೇವಾ ಕಾರ್ಯಗಳು ಆತ್ಮೀಯರು ಮತ್ತುಉ ಕೊಡುಗೈದಾನಿಗಳ ಸಹಕಾರದೊಂದಿಗೆ ಮುಂದುವರೆಸುವೆವು ಎಂದು ಯೋಗೀಶ್ ಶೆಟ್ಟಿ ಜಪ್ಪು ತಿಳಿಸಿದರು.