ಮುಂಬಯಿ, ಮೇ.11: ಮುಂಬಯಿಯಿಂದ ಕರ್ನಾಟಕಕ್ಕೆ ವಿಮಾನ, ರೈಲು ಮತ್ತು ರಸ್ತೆ ಮೂಲಕ ಪ್ರಯಾಣಿಸುವಾಗ ಕೋವಿಡ್ ಸೋಂಕು ಸಂಬಂಧಿ ಲ್ಯಾಬ್ನಿಂದ ನಕಾರಾತ್ಮಕ ಪ್ರಮಾಣಪತ್ರ ಪಡೆಯುವ ಸೂಚನೆಗಳನ್ನು ಹಿಂಪಡೆಯುವಂತೆ ಕರ್ನಾಟಕ ಸರ್ಕಾರಕ್ಕೆ ಮುಂಬಯಿ ಉಚ್ಛನ್ಯಾಯಲಯದ ನ್ಯಾಯವಾದಿ ಮೊರ್ಲಾ ರತ್ನಕರ್ ಶೆಟ್ಟಿ ಮನವಿ ಮಾಡಿದ್ದಾರೆ.
ಇದು ಪ್ರಯಾಣಿಕರಿಗೆ ಒಂದು ರೀತಿಯ ಕಿರುಕುಳ, ಒತ್ತಡ ಮತ್ತು ಸಮಸ್ಯೆಗಳನ್ನು ತಂದೊಡ್ಡಿದೆ. ಇದೊಂದು ಲ್ಯಾಬ್ ಮಾಲೀಕರಿಗೆ ಗಳಿಕೆಯ ಅವಕಾಶ ಮಾತ್ರ ಆಗಿರುತ್ತದೆ. ಆದ್ದರಿಂದ ನಕಾರಾತ್ಮಕ ಪ್ರಮಾಣಪತ್ರದ ಸೂಚನೆಗಳನ್ನು ತಕ್ಷಣ ಹಿಂತೆಗೆದು ಕೊಳ್ಳಬೇಕು ಮತ್ತು ಪ್ರಯಾಣಿಕರಿಗೆ ಆರೋಗ್ಯ ತಪಾಸನಾ ಮುಕ್ತ ಪ್ರಯಾಣಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರನ್ನು ಪತ್ರದ ಮೂಲಕ ವಿನಂತಿಸಿರುವೆ. ಮಹಾರಾಷ್ಟ್ರದಿಂದ ಮಂಗಳೂರು, ಬೆಂಗಳೂರು ಅಥವಾ ಕರ್ನಾಟಕದ ಇನ್ನಿತರ ನಗರ, ಊರುಗಳಿಗೆ ಆಗಮಿಸುವರಿಗೆ ಬೇರೆ ಇತರ ರಾಜ್ಯಗಳು ಇಂತಹ ಯಾವುದೇ ನಿರ್ಬಂಧಗಳನ್ನು ವಿಧಿಸಿಲ್ಲ. ಯಾವುದೇ ನಾಗರಿಕರಿಗೆ ಯಾವುದೇ ನಿರ್ಬಂಧವಿಲ್ಲದೆ ಅವರು ಇಷ್ಟಪಡುವಂತೆ ಅಂತರಾಜ್ಯದೊಳಗೆ ಆರ್ಟಿಪಿಸಿಆರ್ ಪ್ರಮಾಣಪತ್ರವಿನಃ ಪ್ರಯಾಣದ ಹಕ್ಕಿದೆ. ಅಂತೆಯೇ ಕರುನಾಡ ಸರಕಾರವೂ ತಮ್ಮೂರ ಜನತೆಗೆ ಮುಕ್ತ ಅವಕಾಶ ಒದಗಿಸಬೇಕು ಎಂದೂ ರತ್ನಕರ್ ಶೆಟ್ಟಿ ಕರ್ನಾಟಕ ಸರ್ಕಾರಕ್ಕೆ ವಿನಂತಿಸಿದ್ದಾರೆ.