ಅರ್ಹರನ್ನು ಗುರುತಿಸಿ ಪಡಿತರ ಕಿಟ್ ವಿತರಿಸಿ ಫಾ| ಡೆನ್ನಿಸ್ ಸುವಾರಿಸ್
ಮುಂಬಯಿ (ಆರ್ಬಿಐ), ಮೇ.29: ಕರೊನಾ ಎರಡನೇ ಅಲೆಯ ಲಾಕ್ ಡೌನ್ ನಿಂದ ಸಾಮಾನ್ಯ ಜನರ ಬದುಕು ಅತ್ಯಂತ ಕಷ್ಟದಲ್ಲಿದ್ದು ಇಂತಹ ಸಂದರ್ಭದಲ್ಲಿ ಅರ್ಹರನ್ನು ಗುರುತಿಸಿ ಪಡಿತರ ಕಿಟ್ ವಿತರಿಸಿ ಊರುಗೋಲಾಗುವ ಪ್ರಯತ್ನ ನಡೆಸಲಾಗಿದೆ ಎಂದು ಪಾನೀರ್ ಚರ್ಚ್ ಧರ್ಮಗುರು ರೆ| ಫಾ| ಡೆನ್ನಿಸ್ ಸುವಾರಿಸ್ ಹೇಳಿದರು.
ಕಥೊಲಿಕ್ ಸಭಾ ಮಂಗಳೂರು ದಕ್ಷಿಣ ವಲಯ ವತಿಯಿಂದ ಹತ್ತು ಚರ್ಚ್ ವ್ಯಾಪ್ತಿಯ ಆಥಿರ್üಕವಾಗಿ ಹಿಂದುಳಿದ ಕುಟುಂಬಗಳಿಗೆ ಪಡಿತರ ಕಿಟ್ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕೊರೊನಾದಿಂದ ಎಷ್ಟು ಕೆಡುಕಾಗಿದೆಯೋ ಅದಕ್ಕಿಂತಲೂ ಮಿಗಿಲಾಗಿ ಸೇಚಾ ಮನೋಭಾವವೂ ಜನರಲ್ಲಿ ಬಂದಿದೆ. ಕಿಟ್ ವಿತರಣೆ ನಿಟ್ಟಿನಲ್ಲಿ ಹಲವಾರು ದಾನಿಗಳು ಮುಂದೆ ಬಂದಿರುವುದು ಶ್ಲಾಘನೀಯ. ಮೊದಲ ಅಲೆ ವಯೋಮಾನದವರಿಗೆ ಕಂಟಕವಾಗಿದ್ದರೆ, ಎರಡನೇ ಅಲೆ ಯುವಸಮುದಾಯ, ಮಕ್ಕಳಿಗೂ ಕಂಟಕವಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ ಜನರು ಜಾಗರೂಕರಾಗಿರಬೇಕು ಎಂದು ತಿಳಿಸಿದರು.
ಮಂಗಳೂರು ದಕ್ಷಿಣ ವಲಯ ಪ್ರಧಾನ ಧರ್ಮಗುರು ಫಾ| ಸಿಪ್ರಿಯನ್ ಪಿಂಟೋ, ಕಥೊಲಿಕ್ ಸಭಾ ದಕ್ಷಿಣ ವಲಯ ಉಪಾಧ್ಯಕ್ಷ ಮೆಲ್ವಿನ್ ಡಿಸೋಜ, ಕೋಶಾಧಿಕಾರಿ ರೋಶನ್ ಡಿಸೋಜ, ಪಾನೀರ್ ಚರ್ಚ್ ಪಾಲನಾ ಮಂಡಳಿ ಕಾರ್ಯದರ್ಶಿ ಗ್ರೆಟ್ಟಾ ಫೆಲಿಕ್ಸ್ ಡಿಸೋಜ, ಪ್ಲೇವಿ ಡಿಸೋಜ, ವೀರಾ ಡಿಸೋಜ ಇನ್ನಿತರರು ಉಪಸ್ಥಿತರಿದ್ದರು.
ಕಥೊಲಿಕ್ ಸಭಾ ಮಂಗಳೂರು ದಕ್ಷಿಣ ವಲಯ ಅಧ್ಯಕ್ಷ ಆಲ್ವಿನ್ ಡಿಸೋಜ ಪ್ರಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಲವೀನಾ ಗ್ರೆಟ್ಟಾ ವಂದಿಸಿದರು.