ಮುಂಬಯಿ (ಆರ್ಬಿಐ), ಮೇ.31: ಆಯುರ್ವೇದದಲ್ಲಿ ಹೇಳಲಾದ ದಿನಚರ್ಯ ಎಲ್ಲ ಕಾಲದಲ್ಲೂ ಪ್ರಸ್ತುತ. ಹಿತಮಿತ ಆಹಾರ ಸೇವನೆ, ದೈನಂದಿನ ವ್ಯಾಯಾಮ, ಒತ್ತಡರಹಿತ ಜೀವನ ಕ್ರಮವೇ ಆರೋಗ್ಯದ ಸೂತ್ರ. ಕಟ್ಟುನಿಟ್ಟಿನ ಲಾಕ್ಡೌನ್, ಮಾಸ್ಕ್ ಧಾರಣೆ, ದೈಹಿಕ ಅಂತರ ಕಾಪಾಡುವುದು ಅವಶ್ಯ ಎಂದು ಗಂಜಿಮಠ ಆಯುರ್ಸ್ಪರ್ಶ ಡಯಾಬಿಟಿಕ್ ಇನ್ನೋವೇಶನ್ ಫೌಂಡೇಶನ್ (ರಿ.) ಅಧ್ಯಕ್ಷ ಡಾ| ಸತೀಶ್ ಶಂಕರ್ ಬಿ ಅಭಿಪ್ರಾಯ ವ್ಯಕ್ತಪಡಿಸಿದರು.
ಔಷಧಿ ನೀಡುವುದರ ಜೊತೆಗೆ ಕೋವಿಡ್ ಸೋಂಕಿತರಲ್ಲಿ ಧೈರ್ಯ ತುಂಬುವ ಕೆಲಸ ವೈದ್ಯರಿಂದಾಗಬೇಕು. ಸೋಂಕು ಕಾಣಿಸಿಕೊಂಡ 4 ದಿನಗಳಲ್ಲಿ ಜ್ವರ ಕಡಿಮೆಯಾಗುತ್ತದೆ. ಆದರೆ ಸುಸ್ತು ಮತ್ತು ನಿದ್ರಾಹೀನತೆ, ಮೈಕೈ ನೋವು ಕಂಡು ಬಂದಲ್ಲಿ ಅಗತ್ಯ ಪರೀಕ್ಷೆ ಮಾಡಿಕೊಳ್ಳಬೇಕು. ಮಧುಮೇಹ, ಕ್ಯಾನ್ಸರ್ ಮತ್ತು ರಕ್ತದೊತ್ತಡ ರೋಗಿಗಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇದ್ದು, ಇಂತವರಿಗೆ ತಕ್ಷಣ ವ್ಯಾಕ್ಸಿನ್ ನೀಡುವ ವ್ಯವಸ್ಥೆಯಾಗಬೇಕು. ಮಧುಮೇಹ ಮತ್ತು ರಕ್ತದೊತ್ತಡ ನಿಯಂತ್ರಣದಲ್ಲಿಟ್ಟುಕೊಳ್ಳುವುದು ಮುಖ್ಯ. ಈ ನಿಟ್ಟಿನಲ್ಲಿ ಇಚ್ಛಿಸಿದವರಿಗೆ ಮೊಬೈಲ್ನಲ್ಲಿ ಮಾಹಿತಿ ಯಾ ಸಲಹೆ ನೀಡುತ್ತಿದ್ದೇನೆ ಎಂದು ತಿಳಿಸಿದರು.
ಕಷಾಯಕ್ಕೆ ಮಹತ್ವವಿದೆ:
ಕೋವಿಡ್ ಇರಲಿ, ಇಲ್ಲದಿರಲಿ ನಮ್ಮ ಜೀವನಶೈಲಿಯಲ್ಲಿ ಆಯುರ್ವೇದದಲ್ಲಿ ಹೆಸರಿಲಾದ ಔಷಧೀಯ ಗುಣಗಳ ಸಸ್ಯ, ಬಳ್ಳಿ, ಬೇರುಗಳ(ಅಮೃತಬಳ್ಳಿ, ದಶಮೂಲ, ಅಶ್ವಗಂಧ, ಕಹಿಬೇವು, ದಾಲ್ಚಿನಿ, ತುಳಸಿ, ಹಿಪ್ಪಲಿ, ಕಾಳುಮೆಣಸು, ಕರಿಜೀರಿಗೆ..) ಕಷಾಯಕ್ಕೆ ಎಲ್ಲ ಕಾಲದಲ್ಲೂ ಮಹತ್ವವಿದೆ. ಕೊರೊನಾ ಆರಂಭಿಕ ಹಂತದಲ್ಲಿ ಇವೆಲ್ಲ ಉಪಯುಕ್ತ. ಆಯುರ್ವೇದ ಔಷಧದಿಂದಲೂ ಸೋಂಕಿತರು ಗುಣಮುಖರಾಗುತ್ತಾರೆ. ಆಯುರ್ವೇದ ಔಷಧ ವಿತರಣಾ ವ್ಯವಸ್ಥೆಗೆ ಸರ್ಕಾರಗಳು ಆದ್ಯತೆ ನೀಡಬೇಕು ಎಂದರು.
ರೋಗಿಗಳನ್ನು ಸದಾ ನಗುಮುಖದಲ್ಲೇ ಸ್ವಾಗತಿಸುವ ಇವರು ಕೊರೊನಾ ಕಾಲದಲ್ಲಿ ಸೋಂಕಿತರಲ್ಲಿ ಧ್ಯೆರ್ಯ ತುಂಬುದರ ಜೊತೆಗೆ ದುಬಾರಿಯಲ್ಲದ ಔಷಧೀಯ ಸೇವೆಯಲ್ಲಿ ತೊಡಗಿದ್ದಾರೆ. ಸರ್ಕಾರ ಯಾವುದೇ ಮಾರ್ಗಸೂಚಿ ಜಾರಿಗೊಳಿಸಿದರೂ, ಜನರಲ್ಲಿ ಸ್ವಯಂಜಾಗೃತಿ ಮೂಡದ ಹೊರತು ರೋಗ ನಿಯಂತ್ರಣ ಕಷ್ಟ ಎಂದವರು ಬೇಸರದಿಂದ ಹೇಳುತ್ತಾರೆ.
ಸಾಮಾಜಿಕ ಜಾಲತಾಣದಲ್ಲಿ ಕೋವಿಡ್ ಬಗ್ಗೆಯೂ ತಪ್ಪು ಮಾಹಿತಿಗಳು ಹರಿದಾಡುತ್ತಿವೆ. ಇಂತಹ ಸಂದರ್ಭದಲ್ಲಿ ರೋಗದ ಬಗ್ಗೆ ಸರಿಯಾದ ಮಾಹಿತಿ ನೀಡಬೇಕು ಎನ್ನುವ ಡಾ. ಸತೀಶ್ ಶಂಕರ್, ರೋಗ ನಿರೋಧಕ ಶಕ್ತಿ ಹೆಚ್ಚಿಸುವುದರೊಂದಿಗೆ ಹಲವು ಕಾಯಿಲೆಗಳಿಗೆ ಆಯುರ್ಕ್ವಾಥ, ಸಂಶಮನಿ ವಟಿ ಪರಿಣಾಮಕಾರಿ ಔಷಧಿ ಎಂದರು.