ರಾಜ್ಯದಾದ್ಯಂತ ಜೂನ್ 21 ರ ತನಕ ಯಾವುದೇ ಸಾರ್ವಜನಿಕ ವಾಹನಗಳೂ ಸಂಚರಿಸುವಂತಿಲ್ಲ ಎಂದು ಸರಕಾರ ಕಟ್ಟಪ್ಪಣೆ ಮಾಡಿದೆ. ಅದರಲ್ಲೂ ಕೆಲವು ಜಿಲ್ಲೆಗಳಲ್ಲಿ ಲಾಕ್ಡೌನ್ ಸ್ವಲ್ಪ ಮಟ್ಟಿಗೆ ಅನ್ ಲಾಕ್ ಮಾಡಿದ ಸರಕಾರ, ಹನ್ನೊಂದು ಜಿಲ್ಲೆಗಳಲ್ಲಿ ಇನ್ನೂ ಕಠಿಣ ರೀತಿಯಲ್ಲಿ ಲಾಕ್ಡೌನ್ ಜಾರಿಗೊಳಿಸಿ ಆದೇಶಿಸಿದೆ.
ಇಂತಹ ಕಠಿಣ ಕ್ರಮಗಳ ನಡುವೆಯೂ ಶಿಕ್ಷಣ ಇಲಾಖೆ 2021-22 ರ ಶೈಕ್ಷಣಿಕ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಆ ಪ್ರಕಾರ ಜೂನ್ 15 ರಿಂದ ಎಲ್ಲಾ ಶಿಕ್ಷಕರು ಶಾಲೆಗೆ ಹಾಜರಾಗಿ ಶಾಲಾ ಪ್ರಾರಂಭಕ್ಕೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕೆಂದು ಆದೇಶಿಸಿದೆ. ವಿಷಯವೇನೋ ಸರಿಯಾದುದೇ. ಆದರೆ ಸಾರ್ವಜನಿಕ ವಾಹನಗಳಾದ ಬಸ್ಸು, ಇತ್ಯಾದಿಗಳು ಇಲ್ಲದಿರುವಾಗ ಶಿಕ್ಷಕರುಗಳು ಕಡ್ಡಾಯವಾಗಿ ಶಾಲೆಗೆ ಹಾಜರಾಗಬೇಕೆಂದು ನಿರ್ದೇಶಿಸುವ ಇಲಾಖೆಗೆ ತಮ್ಮದೇ ಸರಕಾರದ ಸಾರ್ವಜನಿಕ ವಾಹನದ ನಿರ್ಬಂಧದ ಬಗೆಗೆ ತಿಳಿದಿರ ಬೇಕಿತ್ತು. ಬಹಳ ದೂರದ ಬೀದರ್, ಚಿತ್ರದುರ್ಗ, ಇತ್ಯಾದಿ ತಮ್ಮ ಊರು, ಇತರ ಪ್ರದೇಶಗಳಲ್ಲಿ ಸದ್ಯ ಲಾಕ್ ಡೌನ್ ನಿಂದ ತಡೆಹಿಡಿಯಲ್ಪಟ್ಟ ರಜೆಯ ಕಾರಣ ಊರುಗಳಿಗೆ ತೆರಳಿರುವ ಶಿಕ್ಷಕರುಗಳು ಸಾರ್ವಜನಿಕ ವಾಹನಗಳಿಲ್ಲದೆ ಶಾಲಾ ಪ್ರದೇಶಗಳಿಗೆ ಬರುವುದಾದರೂ ಹೇಗೆ? ಸ್ವಲ್ಪ ಯೋಚಿಸಬೇಕಿತ್ತು. ಇಂತಹ ಆದೇಶಗಳನ್ನು ನೀಡುವದಕ್ಕೆ ಮೊದಲೇ ಸರಕಾರದ ಮಾರ್ಗಸೂಚಿ ಇತ್ಯಾದಿಗಳನ್ನು ಎಲ್ಲಾ ಇಲಾಖೆಗಳೂ ಪರಿಗಣಿಸಬೇಕು. ಸಾರ್ವಜನಿಕ ಸಾರಿಗೆ ಪ್ರಾರಂಭವಾದ ಕನಿಷ್ಠ 4-5 ದಿನ ತರುವಾಯವೇ ಶಾಲಾ ಪ್ರಾರಂಭದ ಸಿದ್ಧತೆಗೆ ಹಾಜರಾಗುವಂತೆ ಆದೇಶ ಹೊರಡಿಸುವುದು ಸೂಕ್ತ-ಯುಕ್ತ-ಮಾನ್ಯ-ಸಮಂಜಸವೆಂದು ಎಲ್ಲ ಶಿಕ್ಷಕರ ಅಭಿಪ್ರಾಯವಾಗಿದೆ.
ಎಲ್ಲಾ ಪರಸ್ಥಳದಲ್ಲಿರುವ ಶಿಕ್ಷಕರ ಪರವಾಗಿ,
ರಾಯೀ ರಾಜ ಕುಮಾರ್, ಅಧ್ಯಕ್ಷರು, ದ.ಕ.ಜಿಲ್ಲಾ ಹಿಂದಿ ಶಿಕ್ಷಕರ ಸಂಘ.