ಮುಂಬಯಿ (ಆರ್ಬಿಐ), ಆ.21: ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗ ಇದರ ಸಂಶೋಧನ ವಿದ್ಯಾಥಿüರ್ನಿ ಕುಮುದಾ ಕೆ. ಆಳ್ವ ಅವರು ಬರೆದು ಸಲ್ಲಿಸಿದ ಮುಂಬಯಿಯ ಕನ್ನಡ ಮುಖವಾಣಿಗಳು ಎಂಬ ಸಂಪ್ರಬಂಧವನ್ನು ಮನ್ನಿಸಿ ಮುಂಬಯಿ ವಿಶ್ವವಿದ್ಯಾಲಯ ಅವರಿಗೆ ಎಂ. ಫಿಲ್ ಪದವಿ ನೀಡಿ ಗೌರವಿಸಿದೆ.
ಕುಮುದಾ ಆಳ್ವ ಅವರು ಕನ್ನಡ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ| ಜಿ.ಎನ್ ಉಪಾಧ್ಯ ಅವರ ಮಾರ್ಗದರ್ಶನದಲ್ಲಿ ಈ ಸಂಪ್ರಬಂಧವನ್ನು ರಚಿಸಿ ಮುಂಬಯಿ ವಿಶ್ವವಿದ್ಯಾಲಯಕ್ಕೆ ಸಾದರ ಪಡಿಸಿದ್ದರು. ಮುಂಬಯಿ ಕನ್ನಡ ಪತ್ರಿಕೋದ್ಯಮದ ಕುರಿತು ಮಾತನಾಡುವಾಗ ಮುಖವಾಣಿಗಳ ಪಾತ್ರವೂ ಗಮನೀಯವಾದುದು. ಮೊಗವೀರ, ಅಕ್ಷಯ, ಬಂಟರವಾಣಿ, ಗೋಕುಲವಾಣಿ, ನೇಸರು, ಸ್ನೇಹಸಂಬಂಧ, ಪತ್ರಪುಷ್ಪ ಹೀಗೆ ಹತ್ತಾರು ಮುಖವಾಣಿಗಳು ಮಾಡಿದ ಕನ್ನಡ ಪರಿಚಾರಿಕೆಯ ಇತಿಹಾಸ ಈ ಸಂಪ್ರಬಂಧದಲ್ಲಿ ದಾಖಲಾಗಿದೆ ಎಂಬುದಾಗಿ ಮೌಲ್ಯಮಾಪಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕುಮುದಾ ಆಳ್ವ ಅವರು ಬಿ.ಕಾಂ ಪದವೀದರೆ ಆಗಿದ್ದು, ಮುಂಬಯಿ ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ ಪದವಿಯನ್ನು ಪ್ರಥಮ ಶ್ರೇಣಿಯಲ್ಲಿ ಗಳಿಸಿದ್ದಾರೆ. ಇವರ ಕತೆ, ಕವನ, ವಿಮರ್ಶೆ, ಲೇಖನಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಮುಂಬಯಿಯ ಚಿಣ್ಣರ ಬಿಂಬ ಸಂಸ್ಥೆಯಲ್ಲಿ ಹಲವಾರು ವರ್ಷಗಳಿಂದ ಶಿಕ್ಷಕಿಯಾಗಿ ಕನ್ನಡ ಸೇವೆಯಲ್ಲಿ ತೊಡಗಿಸಿ ಕೊಂಡಿದ್ದಾರೆ. ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ಕಲಿಕಾ ಯೋಜನೆಯ ಶಿಕ್ಷಕರಾಗಿಯೂ ಕೆಲಸ ಮಾಡಿದ್ದಾರೆ. ಬೋಂಬೆ ಬಂಟ್ಸ್ ಎಸೋಸಿಯೇಶನ್, ಥಾಣೆ ಬಂಟ್ಸ್ ಎಸೋಸಿಯೇಶನ್, ಘೋಡ್ಬಂದರ್ ಕನ್ನಡ ಸಂಘ ಇತ್ಯಾದಿ ಸಂಘ ಸಂಸ್ಥೆಗಳಲ್ಲಿ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.