ಮುಂಬಯಿ (ಆರ್ಬಿಐ), ಸೆ.27: ಗುಜರಾತ್ ಬಿಲ್ಲವರ ಸಂಘದ ಗೌರವಾಧ್ಯಕ್ಷ, ಗಾಯತ್ರಿ ಶಕ್ತಿ ಪೀಠ (ಗಾಯತ್ರಿ ಪರಿವಾರ) ಬರೋಡ-ಗುಜರಾತ್ ಇದರ ಪ್ರಮುಖ ಬಂಧು ದಯಾನಂದ ಬೊಂಟ್ರ (ಬೆಳ್ಮಣ್ಣು) ಬರೋಡಾ ಪತ್ನಿ ಶೋಭಾ ದಯಾನಂದ್ ಸಮೇತರಾಗಿ ಇಂದಿಲ್ಲಿ ಸೋಮವಾರ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕು ಬಡಗನ್ನೂರು ಇಲ್ಲಿನ ದೇಯಿ ಬೈದ್ಯೆತಿ-ಕೋಟಿ ಚೆನ್ನಯರ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತ್ಲ್ ಇಲ್ಲಿಗೆ ಭೇಟಿ ನೀಡಿ ಕ್ಷೇತ್ರದ ಶಕ್ತಿಗಳ ದರ್ಶನ ಪಡೆದರು.
ಜಯಂತ್ ನಡುಬೈಲ್ ಮತ್ತಿತರರು ದಯಾನಂದ ಬೋಂಟ್ರಾ ಅವರನ್ನು ಸ್ವಾಗತಿಸಿ ಸುಮಾರು ಒಂದುವರೆ ವರ್ಷಗಳ ಹಿಂದೆ ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಶಾಸ್ತ್ರೋಕ್ತವಾಗಿ ನೂತನ ಕೊಡಿಮರ ಪ್ರತಿಷ್ಠೆ, ಆದಿದೈವ ಧೂಮಾವತಿ ಮತ್ತು ಸಪರಿವಾರ ದೈವಗಳ ಪುನಃರ್ ಪ್ರತಿಷ್ಠೆ, ಮಹಾಮಾತೆ ದೇಯಿ ಬೈದ್ಯೆತಿ ಸತ್ಯಧರ್ಮ ಚಾವಡಿ, ಗೆಜ್ಜೆಗಿರಿ ಕೋಟಿ ಚೆನ್ನಯರ ಮೂಲಸ್ಥಾನ ಗರಡಿ ಪ್ರತಿಷ್ಠೆ ಮತ್ತು ಗೆಜ್ಜೆಗಿರಿ ಮೂಲಸ್ಥಾನ ಗರಡಿ ನೇಮೋತ್ಸವ ಇತ್ಯಾದಿಗಳೊಂದಿಗೆ ಶ್ರದ್ಧಾಭಕ್ತಿ, ಸಡಗರದೊಂದಿಗೆ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ನಡೆದದ್ದನ್ನು ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಜಯಂತ್ ನಡುಬೈಲ್ ಪ್ರಸ್ತಾಪಿಸಿ ಕ್ಷೇತ್ರದ ಬ್ರಹ್ಮಕಲಶೋತ್ಸವದ ಸಂದರ್ಭ ಕೊಡಿಮರಕ್ಕೆ ತಾಮ್ರದ ಹೊದಿಕೆಯ ಸೇವಾ ಕರ್ತನಾಗಿದ್ದ ಬೋಂಟ್ರಾ ಪರಿವಾರದ ಸೇವೆ ಪ್ರಶಂಸಿಸಿದರು.
ಕ್ಷೇತ್ರದಲ್ಲಿ ನಡೆಯುತ್ತಿರುವ ಕೆಲಸಗಳನ್ನು ವೀಕ್ಷಿಸಿದ ಬೋಂಟ್ರಾರು ಅನ್ನಸಂತರ್ಪಣಾ ಸೇವೆಗೈದರು. ಕ್ಷೇತ್ರದ ತಂತ್ರಿವರ್ಯರು ಪ್ರಸಾದವನ್ನಿತ್ತು ಹರಸಿ ಶ್ರೀಯುತರು ಮತ್ತು ಕುಟುಂಬಸ್ಥರಿಗೆ ಕ್ಷೇತ್ರದ ಸರ್ವ ಶಕ್ತಿಗಳು ಅನುಗ್ರಹಿಸಲಿ ಎಂದು ಹಾರೈಸಿದರು.