ಮುಂಬಯಿ (ಆರ್ಬಿಐ), ಫೆ.03: ನಿಧನ ಬೃಹನ್ಮುಂಬಯಿ ಇಲ್ಲಿನ ಹಿರಿಯ ಕವಿ, ಸಾಹಿತಿ-ಪತ್ರಕರ್ತ ಕೋಡು ಭೋಜ ಶೆಟ್ಟಿ (82.) ಇಂದಿಲ್ಲಿ ಗುರುವಾರ ಮುಂಜಾನೆ ಉಪನಗರ ಮುಲುಂಡ್ ಪಶ್ಚಿಮದ ಸಿಟಿ ಆಫ್ ಜೊೈಸ್ ಇದರ ಹುರಾ ಅಪಾರ್ಟ್ಮೆಂಟ್ನ ಸ್ವನಿವಾಸದಲ್ಲಿ ತೀವ್ರ ವೃದ್ಧಾಪ್ಯ ಸಹಜ ಅಸ್ವಸ್ಥತೆಯಿಂದ ನಿಧನರಾದರು.
ಓರ್ವ ಸಾಹಿತಿ, ನಾಟಕಕಾರ, ನಿರ್ದೇಶಕ, ಹೊಟೇಲು ಉದ್ಯಮಿಯಾಗಿ ಜನಾನುರೆಣಿಸಿದ್ದ ಮೃತರು ಸಾಮಾಜಿಕ ಕಾಳಜಿವುಳ್ಳವರಾಗಿದ್ದು, ಜನಪರ ಸೇವೆಯಲ್ಲಿ ನಿರತರಾಗಿ ಜನಾನುರೆಣಿಸಿದ್ದರು.
ಸುಮಾರು 500ಕ್ಕೂ ಮಿಕ್ಕಿ ಕತೆ, ಕವಿತೆ, ಲೇಖನಗಳನ್ನು ರಚಿಸಿದ್ದು ಹಾಸ್ಯಕವಿ ಎಂದೇ ಪ್ರಸಿದ್ಧರಾಗಿದ್ದರು. ಇವರು ಸುಮಾರು 30ಕ್ಕೂ ಅಧಿಕ ನಾಟಕಗಳನ್ನು ರಚಿಸಿದ್ದು ಅವುಗಳಲ್ಲಿ ಸುಮಾರು 15 ಪ್ರಕಾಶಿತಗೊಂಡಿದ್ದವು. ಅಂತೆಯೇ ಇವರು ರಚಿತ ಕಪ್ಪು ನೆತ್ತೆರ್ ನಾಟಕಕ್ಕೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಗೌರವ ಪ್ರಾಪ್ತಿಯಾಗಿತ್ತು. ಬಂಟರ ಸಂಘ ಮುಂಬಯಿ ಇದರ ಮುಖವಾಣಿ ಬಂಟರವಾಣಿ ಇದರ ಸಂಪಾದಕರಾಗಿ ಸೇವೆ ಸಲ್ಲಿಸಿದ್ದ ಮೃತರು ಪತ್ನಿ, ಎರಡು ಹೆಣ್ಣು ಸೇರಿದಂತೆ ಬಂಧು ಬಳಗವನ್ನು ಅಗಲಿದ್ದಾರೆ.
ಭೋಜ ಶೆಟ್ಟಿ ನಿಧನಕ್ಕೆ ಬಂಟ್ಸ್ ಸಂಘ ಮುಂಬಯಿ ಅಧ್ಯಕ್ಷ ಚಂದ್ರಹಾಸ ಕೆ.ಶೆಟ್ಟಿ, ಉಪಾಧ್ಯಕ್ಷ ಉಳ್ತೂರು ಮೋಹನ್ದಾಸ್ ಶೆಟ್ಟಿ, ಗೌ| ಪ್ರ| ಕಾರ್ಯದರ್ಶಿ ಡಾ| ಆರ್.ಕೆ ಶೆಟ್ಟಿ, ಗೌ| ಕೋಶಾಧಿಕಾರಿ ಸಿಎ| ಹರೀಶ್ ಡಿ.ಶೆಟ್ಟಿ ಮತ್ತು ಪದಾಧಿಕಾರಿಗಳು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಜಿ.ಕತ್ತಲ್ಸಾರ್ ಮತ್ತು ಸದಸ್ಯರು ಸಂತಾಪ ವ್ಯಕ್ತ ಪಡಿಸಿ ಶ್ರದ್ಧಾಂಜಲಿ ಕೋರಿದ್ದಾರೆ.