ನಾನು ಸಾಮಾನ್ಯ ಜನರ ಸಂಘಟಕ : ಸರ್ವೋತ್ತಮ ಶೆಟ್ಟಿ ಅಬುಧಾಬಿ
ಮುಂಬಯಿ (ಆರ್ಬಿಐ), ಫೆ.14: : ಮುಂಬಯಲ್ಲಿ ಕಾಲೇಜಿಗೆ ಸೇರಿದಂದಿನಿಂದ ಸಾಂಘಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು, ನಾಟಕ, ಕ್ರೀಡೆ, ಜನಪದ ನೃತ್ಯ ಹಾಗೂ ಇತರ ಸಾಂಸ್ಕೃತಿಕ ಚಟುವಟಿಕೆಯ ಮುಂದಾಳತ್ವ ವಹಿಸಿಕೊಂಡು ಅನೇಕ ಕಾರ್ಯಕ್ರಮಗಳ ಆಯೋಜನೆ ಹಾಗೂ ಪ್ರಾಯೋಜಕತ್ವ ಮಾಡಿಕೊಂಡು ಬಂದಿದ್ದೇನೆ. ತುಳು, ಕನ್ನಡದ ಮೇಲಿನ ಭಾಷಾಭಿಮಾನದಿಂದ ಇಲ್ಲಿನ ತುಳು ಕನ್ನಡಿಗರನ್ನು ಸಂಘಟಿಸಿ, ನಾಟಕವನ್ನು ಬರೆಸಿ, ದಿಗ್ದರ್ಶಿಸಿ, ರಂಗದ ಮೇಲೆ ತರುವುದಕ್ಕೆ ಸಾಧ್ಯವಾಯಿತು. ನಾಟಕವನ್ನು ಉಳಿಸುವ ಹೋರಾಟದ ದಿನಗಳು ಇಂದಿಗೂ ನೆನಪಾಗುತ್ತದೆ. 14 ಕಾಲೇಜುಗಳಲ್ಲಿ ಕನ್ನಡ ನಾಟಕ ಪ್ರದರ್ಶನವಾಯಿತು. ಕಲಾಜಗತ್ತು ಎಂಬ ಸಂಸ್ಥೆಯನ್ನು ರಂಗತಜ್ಞ ವಿಜಯ್ ಕುಮಾರ್ ಶೆಟ್ಟಿಯವರೊಂದಿಗೆ ಸೇರಿ ಸ್ಥಾಪಿಸಲಾಯಿತು. ಸೌತ್ ಕೆನರಾ ಕಬಡ್ಡಿ ಪ್ಲೇಯರ್ಸ್ ತಂಡ ಮಾಡಿ ಕಬಡ್ಡಿ ಆಟದಲ್ಲೂ ಭಾಗವಹಿಸಿ ಬಹುಮಾನಗಳನ್ನು ಗಳಿಸಿದ್ದೇವೆ. ಅಬುಧಾಬಿಗೆ ಹೋದಮೇಲೂ ಕನ್ನಡ ತುಳು ಭಾಷಾಭಿಮಾನ ಬಿಡದೆ, ಅಲ್ಲಿಯೂ ಬಂಟರ ಸಂಘ ಅಬುಧಾಬಿ ಕನ್ನಡ ಸಂಘ, ಯುಎಇ ತುಳು ಕೂಟಗಳನ್ನು ಸ್ಥಾಪಿಸಲಾಯಿತು. ನನಗೆ ಯಾವುದೇ ತಾರತಮ್ಯವಿಲ್ಲ. ಮೂರು ವಿಶ್ವ ಕನ್ನಡ ಸಮ್ಮೇಳನಗಳನ್ನು ಆಯೋಜಿಸಿದ್ದೇವೆ. ಅನೇಕಾನೇಕ ಮಾನವೀಯ ಕೆಲಸಗಳಲ್ಲಿ ಕೈಜೋಡಿಸಿದ್ದೇವೆ. ತಮ್ಮಿಂದಾದಷ್ಟು ಸಮಾಜ ಸೇವೆಯ ಕೈಂಕರ್ಯದಲ್ಲಿ ತೊಡಗಿಸಿಕೊಂಡಿದ್ದೇವೆ. ಅಲ್ಲಿಯ ಜನರಿಗೆ ಭಾರತೀಯರ ಮೇಲೆ ಗೌರವಾಭಿಮಾನವಿದೆ. ಅಲ್ಲಿಯ ಕಾನೂನು ಕಟ್ಟಳೆಗಳನ್ನು ಪಾಲಿಸಬೇಕು . ಆರೋಗ್ಯ, ಶಿಕ್ಷಣ ಇನ್ನೂ ಅನೇಕ ಸೌಲಭ್ಯ ಸವಲತ್ತುಗಳನ್ನು ಉಚಿತವಾಗಿ ಒದಗಿಸುವ ಅತ್ಯುತ್ತಮ ರಾಷ್ಟ್ರ ಎಂದು ಅಂದಿನಿಂದ ಇಂದಿನವರೆಗಿನ ಅನೇಕ ನೆನಪುಗಳನ್ನು ಮೆಲುಕು ಹಾಕಿದರು. ನಾಯಕನಾದವನು ಬೇರೆ ನಾಯಕರನ್ನು ಸೃಷ್ಟಿಸುವುದೇ ನಿಜವಾದ ನಾಯಕತ್ವ ನಾನು ಸಾಮಾನ್ಯ ಜನರ ಸಂಘಟಕ ಎಂದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಅನಿವಾಸಿ ಭಾರತೀಯ ಅಬುಧಾಬಿ ಉದ್ಯಮಿ, ಸಂಘಟಕ ಸರ್ವೋತ್ತಮ ಶೆಟ್ಟಿ ತಿಳಿಸಿದರು.
ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗವು ಇಂದಿಲ್ಲಿ ಸೋಮವಾರ ಮಧ್ಯಾಹ್ನ ಆಯೋಜಿಸಿರುವ ವಿಶೇಷ ಮುಖಾಮುಖಿ ಕಾರ್ಯಕ್ರಮದಲ್ಲಿ `ಸಾಂಘಿಕ ಚಟುವಟಿಕೆಯ ಪ್ರಸ್ತುತತೆ ವಿಷಯವಾಗಿಸಿ ಸರ್ವೋತ್ತಮ ಶೆಟ್ಟಿ ಮಾತನಾಡಿದರು.
ಐಲೇಸಾ (ದಿ ವಾಯ್ಸ್ ಆಫ್ ಓಷನ್) ಟೀಂ ಮುಂಬಯಿ ಸಂಯೋಜಕ ಸೂರಿ ಮಾರ್ನಾಡ್ ಸಂವಾದದಲ್ಲಿ ಪಾಲ್ಗೊಂಡು ಸರ್ವೋತ್ತಮ ಶೆಟ್ಟಿಯವರ ಕಾರ್ಯಚಟುವಟಿಕೆಗಳ ಬಗ್ಗೆ ಹಾಗೂ ಐಲೇಸಾ ದಿ ವಾಯ್ಸ್ ಆಫ್ ಓಷಿಯನ್ ಸಂಸ್ಥೆಯ ಬಗ್ಗೆ ವಿವರಗಳನ್ನು ಹಂಚಿಕೊಂಡರು ಎಂದರು.
ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಪ್ರಾಧ್ಯಾಪಕ, ಮುಖ್ಯಸ್ಥ ಡಾ| ಜಿ.ಎನ್ ಉಪಾಧ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ ಸಾಧಿಸಿದರೆ ಸಬಳ ನುಂಗಬಹುದು ಎಂಬುದಕ್ಕೆ ಉತ್ತಮ ಉದಾಹರಣೆ ಸರ್ವೋತ್ತಮ ಶೆಟ್ಟಿಯವರು .ಸರ್ವೋತ್ತಮ ಹೆಸರು ಅನ್ವರ್ಥವಾಗುವ ಹಾಗೆ ವ್ಯಕ್ತಿಯಲ್ಲಿ ಶಕ್ತಿಯಾಗಿ, ಸಾಗರೋತ್ತರದಲ್ಲಿ ನಾಡಿನ ಹೆಸರು ಬೆಳಗಿಸಿದ, ತುಳು ಕನ್ನಡಿಗರನ್ನು ಒಂದುಗೂಡಿಸಿದ ಶಕ್ತಿ ಕೇಂದ್ರ ಅವರು. ವೃತ್ತಿಯಿಂದ ಉದ್ಯಮಿಯಾಗಿ ಕರ್ನಾಟಕದ ಮೇಲಿನ ಕಾಳಜಿಯಿಂದ ಕಾಲಿಗೆ ಚಕ್ರ ಕಟ್ಟಿಕೊಂಡು ಕೆಲಸ ಮಾಡುವ ಧೀಮಂತ ಚೇತನ, ತುಳು ಕನ್ನಡಿಗರ ಪ್ರೀತಿಗೆ ಪಾತ್ರರಾಗಿದ್ದಾರೆ ಎಂದರು.
ಕನ್ನಡ ವಿಭಾಗದ ಸಂಶೋಧನ ಸಹಾಯಕಿ ಕಲಾ ಭಾಗ್ವತ್ ಸ್ವಾಗತಗೀತೆಯನ್ನಾಡಿದರು. ಕನ್ನಡ ವಿಭಾಗದ ಸಹಪ್ರಾಧ್ಯಾಪಕಿ ಡಾ| ಪೂರ್ಣಿಮಾ ಸುಧಾಕರ ಶೆಟ್ಟಿ ಅತಿಥಿsಗಳನ್ನು ಸ್ವಾಗತಿಸಿ, ಕಾರ್ಯಕ್ರಮ ಸಂಯೋಜಿಸಿದರು. ಕಲಾವಿದ ಮೋಹನ್ ಮಾರ್ನಾಡ್ ಸೇರಿದಂತೆ ವಿದ್ಯಾಥಿರ್sಗಳು ಉಪಸ್ಥಿತರಿದ್ದರು.