ತುಳು ಸಂಘ ಬರೋಡಾ ಸಂಭ್ರಮಿಸಿದ ತೆನೆ (ಕದಿರು) ಹಬ್ಬ
ಬರೋಡಾ (ಆರ್ಬಿಐ), ಅ.05: ಗುಜರಾತ್ ರಾಜ್ಯದ ಬರೋಡಾ ಇಲ್ಲಿ ಸೇವಾನಿರತ ತುಳು ಸಂಘ ಬರೋಡಾ ಮಹಾನಗರದಲ್ಲಿನ ಇಂಡಿಯಾ ಬುಲ್ಸ್ ಮೆಘಾ ಮಾಲ್ನಲ್ಲಿ ತುಳು ಸಂಘ ಬರೋಡಾ ನಿರ್ಮಿತ ವಿಶ್ವದ ಪ್ರಪ್ರಥಮ ಹಾಗೂ ಏಕೈಕ ತುಳು ಚಾವಡಿಯಲ್ಲಿ ಇಂದಿಲ್ಲಿ ಬುಧವಾರ ವಿಜೃಂಭನೆಯಿಂದ ದಸರಾ ಹಬ್ಬ ಆಚರಿಸಿತು.
ತುಳು ಸಂಘ ಬರೋಡಾ ಇದರ ಅಧ್ಯಕ್ಷ ಶಶಿಧರ್ ಬಿ.ಶೆಟ್ಟಿ ಗುರುವಾಯನಕೆರೆ ಮತ್ತು ಗೌರವಾಧ್ಯಕ್ಷ ದಯಾನಂದ ಬೋಂಟ್ರ ಅವರ ಮಾರ್ಗದರ್ಶನದಲ್ಲಿ ನಡೆಸಲ್ಪಟ್ಟ ಧಾರ್ಮಿಕ ಮತ್ತು ಸಾಂಸ್ಕೃತಿಕ ವೈಭವದಲ್ಲಿ ತುಳುನಾಡ ಹಬ್ಬದ ವಾತಾವರಣ ಸೃಷ್ಟಿಸಿದ ಸದಸ್ಯರು ಹೊಸಬೆಳೆಯನ್ನು ಬರಮಾಡಿಕೊಂಡು ಕದಿರೆ ಕಟ್ಟಿ ಸಾಂಪ್ರದಾಯಿಕವಾಗಿ ತೆನೆಹಬ್ಬ ಆಚರಿಸಿದರು. ಡಿಲೈಟ್ ಇಂಜಿನೀಯರ್ಸ್ ಪ್ರೈವೇಟ್ ಲಿಮಿಟೆಡ್ ಇದರ ಆಡಳಿತ ನಿರ್ದೇಶಕ, ಸಂಘದ ಹಿರಿಯ ಸದಸ್ಯ ದಿನೇಶ್ ಶೆಟ್ಟಿ ನ್ಯಾಯಂಪಾಡಿ (ಉಡುಪಿ) ಮತ್ತು ಡಾ| ಅನಿತಾ ಡಿ.ಶೆಟ್ಟಿ ದಂಪತಿ ಕಾರ್ಯಕ್ರಮದ ಯಜಮಾನತ್ವ ವಹಿಸಿದ್ದು ತೆನೆಯನ್ನು (ಕದಿರು) ಹೊತ್ತು ತುಳಸೀ ಕಟ್ಟೆ ಸುತ್ತು ಬಂದು ಕೈಮುಗಿದು ಚಾವಡಿಯಲ್ಲಿನ ಶೃಂಗರಿತ ದೇವರ ಮಂಟದ ಮುಂದಿರಿಸಿ ಸೀಯಾಳ, ಹಸುವಿನ ಹಾಲಿನ ಅಭಿಷೇಕಗೈದು ಪ್ರಾರ್ಥನೆ ನೆರವೆರಿಸಿದರು. ಬಳಿಕ ಹೊಸ ಭತ್ತವನ್ನು ಸುಲಿದ ಅಕ್ಕಿಯೊಂದಿಗೆ ಹೊಸ ಅಕ್ಕಿ ಊಟ, ಪಾಯಸ, ಬಗೆಬಗೆಯ ಪಲ್ಯಗಳೊಂದಿಗೆ ರುಚಿಕರ ಶುದ್ಧ ಶಾಖಾಹಾರಿ ಭೋಜನ ಸವಿದು ತೆನೆಹಬ್ಬ, ದಸರಾ ಸಂಭ್ರಮಿಸಿದರು.
ಸುಮಾರು ಮೂರು ದಶಕಗಳಿಂದ ಅನನ್ಯ ಸೇವೆಸಲ್ಲಿಸಿದ್ದ ಸಂಘದ ಗೌರವ ಪ್ರಧಾನ ಕೋಶಾಧಿಕಾರಿ ವಾಸು ಪಿ.ಪೂಜಾರಿ ಅವರು ಕೋಶಾಧಿಕಾರಿ ಸ್ಥಾನವನ್ನು ಪಿ.ಬಾಲಚಂದ್ರ ಗೌಡ ಇವರಿಗೆ ವಹಿಸಿ ಹುದ್ದೆಯ ಅಧಿಕಾರ ವಹಿಸಿಕೊಟ್ಟರು. ಸಂಸ್ಥೆಯ ಸದಸ್ಯರ ಮಕ್ಕಳಾಗಿದ್ದು ಕಳೆದ ಎಸ್ಎಸ್ಸಿ ಮತ್ತು ಹೆಚ್ಎಸ್ಸಿ ಪರೀಕ್ಷೆಗಳಲ್ಲಿ ಉತ್ಕೃಷ್ಟ ಅಂಕಗಳೊಂದಿಗೆ ಉತ್ತೀರ್ಣರಾದ ವಿದ್ಯಾಥಿರ್üಗಳಿಗೆ ಉಪಸ್ಥಿತ ಪದಾಧಿಕಾರಿಗಳು ಪ್ರತಿಭಾ ಪುರಸ್ಕಾರ ಪ್ರದಾನಿಸಿ ಅಭಿನಂದಿಸಿದರು.
ಕೆ.ಮಾಧವ ಶೆಟ್ಟಿ, ಸತೀಶ್ ಶೆಟ್ಟಿ, ಎಸ್.ಕೃಷ್ಣ ಶೆಟ್ಟಿ, ಶಕುಂತಳಾ ಬಿ.ಶೆಟ್ಟಿ, ಮಹಾವೀರ್ ಬಿ.ಜೈನ್, ರವಿ ಶೆಟ್ಟಿ, ವಿಶಾಲ್ ಶಾಂತಾ, ಸ್ವಾತಿ ವಿ.ಶಾಂತಾ, ಮದನ್ಕುಮಾರ್ ಮೂಡುಗೆರೆ, ಗಾನ್ವಿ ಎಂ.ಗೌಡ, ವಾಸು ವಿ.ಸುವರ್ಣ, ದಯಾನಂದ್ ಸಾಲ್ಯಾನ್, ಹೆಜ್ಮಾಡಿ,ನಳಿನಿ ವಿ.ಪೂಜಾರಿ ಸೇರಿದಂತೆ ಅಪಾರ ಸಂಖ್ಯೆಯ ಸದಸ್ಯರು ಉಪಸ್ಥಿತರಿದ್ದು ಪೂಜೆಗಳಲ್ಲಿ ಉಪಯೋಗಿಸಲ್ಪಟ್ಟ ಹಣ್ಣುಹಂಪಲು, ತರಕಾರಿ, ಕಾಯಿಪಲ್ಯಗಳು ಹಾರಾಜು ನಡೆಸಲಾಗಿದ್ದು ಸದಸ್ಯರು ಭಾರೀ ಮೊತ್ತದಲ್ಲಿ ಕೂಗುಬೆಲೆಯಲ್ಲಿ ತನ್ನದಾಗಿಸಿಕೊಂಡರು.
ಮಹಿಳೆಯರು ಪ್ರಾರ್ಥನೆಯನ್ನಾಡಿದರು. ಸಂಘದ ಮಹಿಳಾ ಮುಖ್ಯಸ್ಥೆ ಡಾ| ಶರ್ಮಿಳಾ ಎಂ.ಜೈನ್ ಸ್ವಾಗತಿಸಿದರು. ಗೌರವ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಎ.ಶೆಟ್ಟಿ ಪ್ರಸ್ತಾವಿಕ ನುಡಿಗಳನ್ನಾಡಿ ಕಾರ್ಯಕ್ರಮ ನಿರೂಪಿಸಿದರು. ಗೌರವ ಪ್ರಧಾನ ಕೋಶಾಧಿಕಾರಿ ಪಿ.ಬಾಲಚಂದ್ರ ಗೌಡ ವಂದನಾರ್ಪಣೆಗೈದರು.