ವಿಜೃಂಭನೆಯಿಂದ ಪೂರೈಸಲ್ಪಟ್ಟ 49ನೇ ವಾರ್ಷಿಕ ನವರಾತ್ರಿ ಮಹೋತ್ಸವ
ಮುಂಬಯಿ, ಅ.07: ಮಹಾನಗರದಲ್ಲಿನ ಹಿರಿಯ ಮತ್ತು ಪ್ರತಿಷ್ಠಿತ ಹೊಟೇಲು ಉದ್ಯಮಿ ಪದ್ಮಕರ್ ಗಂಭೀರ್ ಮುಂದಾಳುತ್ವದಲ್ಲಿ ಸ್ಥಾಪಿತ ಚರ್ಚಗೇಟ್ ಇಲ್ಲಿನ ಶಾಸಕರ ವಸತಿಯ ಶ್ರೀ ದುರ್ಗಾಂಬಿಕಾ ಭಜನಾ ಮಂಡಳಿ ತನ್ನ 49ನೇ ವಾರ್ಷಿಕ ನವರಾತ್ರಿ ಮಹೋತ್ಸವ ವಿಜೃಂಭನೆಯಿಂದ ಪೂರೈಸಿತು.
2022ನೇ ಸಾಲಿನ ನವರಾತ್ರಿ ಮಹೋತ್ಸವದ ಒಂಭತ್ತು ದಿನಗಳಲ್ಲಿ ಭಜನಾ ಮಂಡಳಿಯ ಶ್ರೀ ದುರ್ಗಾಂಬಿಕಾ ಸನ್ನಿಧಿಯಲ್ಲಿ ಗಣಹೋಮ, ನಿತ್ಯಪೂಜೆ, ಶ್ರೀ ಅಣ್ಣಪ್ಪ ಪಂಜುರ್ಲಿ ದೈವದ ಪೂಜೆ, ಮಹಾಕಾಳಿ ಅಮ್ಮನವರ ಪೂಜೆ, ಭಜನೆ ಮತ್ತು ಮಂಗಳಾರತಿ ನೆರವೇರಿಸಲಾಯಿತು. ವಿಜಯ ದಶಮಿದಿನ ಬೆಳಿಗ್ಗೆ ಕಳಸಪೂಜೆ, ಭಜನೆ, ಮಹಾಪೂಜೆ ಮತ್ತು ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ಮೆರವಣಿಗೆಯೊಂದಿಗೆ ಚೌಪಾಟಿಯಲ್ಲಿ ಕಳಸ ವಿಸರ್ಜನೆ ನಡೆಸಲಾಗಿ ದಸರಾ ಮಹೋತ್ಸವದ ಆರಂಭೋತ್ಸವದ ದಿನ ಘಟಸ್ಥಾಪನೆಯೊಂದಿಗೆ ಆದಿಗೊಂಡ ನವರಾತ್ರಿ ಉತ್ಸವವು ವಿಜಯದಶಮಿದಿನ ಸಮಾಪನ ಗೊಂಡಿತು.
ಕಳಸ ಪೂಜೆಯಲ್ಲಿ ಅಜಂತಾ ಕ್ಯಾಟರರ್ಸ್ನ ಮಾಲೀಕ, ಭಜನಾ ಮಂಡಳಿ ಗೌರವಾಧ್ಯಕ್ಷ ಜಯರಾಮ ಬಿ.ಶೆಟ್ಟಿ ಇನ್ನ, ಅಧ್ಯಕ್ಷ ಹರೀಶ್ ಎಸ್.ಖೇಂಡೆಕರ್, ಉಪಾಧ್ಯಕ್ಷ ನವೀನ್ ಕೆ.ಶೆಟ್ಟಿ, ಗೌ| ಪ್ರ| ಕಾರ್ಯದರ್ಶಿ ಸುರೇಶ್ ಶೆಟ್ಟಿ, ಕಾರ್ಯದರ್ಶಿ ರಾಜು ಪೂಜಾರಿ, ಕೋಶಾಧಿಕಾರಿ ಸೋಮಶೇಖರ ಬಂಗೇರ, ಜೊತೆ ಕಾರ್ಯದರ್ಶಿಗಳಾದ ಚಂದ್ರ ಮೋಗವೀರ, ಯೋಗೇಶ್ ಪುತ್ರನ್, ಯೋಗೇಶ್ ಬಂಗೇರ, ಜೊತೆ ಕೋಶಾಧಿಕಾರಿ ಮನು ಪಟೇಲ್, ಪ್ರದಾನ ಸಲಹೆಗಾರರಾದ ವಿಠ್ಠಲ್ ಶೇರಿಗಾರ್ ಕಟಪಾಡಿ ಸೇರಿದಂತೆ ನಗರದ ನೂರಾರು ಗಣ್ಯರು, ಭಕ್ತರು ವಾರ್ಷಿಕ ದಸರೋತ್ಸವದಲ್ಲಿ ಪಾಲ್ಗೊಂಡÀು ಶ್ರೀ ದುರ್ಗಾಂಬಿಕೆ ಅಮ್ಮ, ಶ್ರೀ ಮಹಾಕಾಳಿ ಹಾಗೂ ಶ್ರೀ ಅಣ್ಣಪ್ಪ ಪಂಜುರ್ಲಿ ದೈವದ ಕೃಪೆಗೆ ಪಾತ್ರರಾದರು.
ಈ ವರ್ಷ ಶ್ರೀ ದುರ್ಗಾಂಬಿಕಾ ಭಜನಾ ಮಂಡಳಿ ತನ್ನ 49ನೇ ವಾರ್ಷಿಕ ಪೂಜೆ ಪೂರೈಸಿದ್ದು ಮುಂದಿನ ವರ್ಷ ಸ್ವರ್ಣ ಸಂಭ್ರಮಕ್ಕೆ ಸಿದ್ಧತೆ ನಡೆಸಲಿದೆ. ಇದು ನಮ್ಮೆಲ್ಲರ ನಂಬಿಕೆ ಮತ್ತು ಶ್ರದ್ಧೆಯ ಪ್ರತೀಕವಾಗಿ ಮುನ್ನಡೆದ ಫಲವಾಗಿದೆ ಎಂದು ಗೌರವಾಧ್ಯಕ್ಷ ಜಯರಾಮ ಶೆಟ್ಟಿ ಇನ್ನ ತಿಳಿಸಿದರು.