ಉಜಿರೆ: ಸುಮಾರು ಇನ್ನೂರು ವರ್ಷಗಳ ಭವ್ಯ ಇತಿಹಾಸ ಮತ್ತು ಪರಂಪರೆಯನ್ನು ಹೊಂದಿರುವ ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಹರಿಕೆ ಬಯಲಾಟ ಪ್ರದರ್ಶನ ತಿರುಗಾಟ ಶನಿವಾರ ಆರಂಭಗೊಂಡಿದೆ.
ಈಗಾಗಲೇ ಕೆಲವು ದಿನಗಳಲ್ಲಿ ಧರ್ಮಸ್ಥಳದಲ್ಲಿ ಸೇವಾಕರ್ತರ ವತಿಯಿಂದ ಹರಿಕೆ ಬಯಲಾಟ ಪ್ರದರ್ಶನಗೊಂಡಿದ್ದು ಮುಂದೆ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಪ್ರತಿ ದಿನ ಸಂಜೆ 7.00 ಗಂಟೆಯಿಂದ ರಾತ್ರಿ 12.00ರ ವರೆಗೆ ಕಾಲಮಿತಿಯ ಹರಿಕೆ ಪ್ರದರ್ಶನ ನಡೆಯಲಿದೆ.
2023ರ ಮೇ 23ರ ವರೆಗೆ ಬಯಲಾಟ ಪ್ರದರ್ಶನದ ಬಳಿಕ ಮೂರು ದಿನ ಧರ್ಮಸ್ಥಳದಲ್ಲಿ ಸೇವಾ ಬಯಲಾಟ ಪ್ರದರ್ಶನದೊಂದಿಗೆ ಬಯಲಾಟ ಪ್ರದರ್ಶನ ಮುಕ್ತಾಯಗೊಳ್ಳುತ್ತದೆ.
ಆಧ್ಯಾತ್ಮಿಕ ಮತ್ತು ಧಾರ್ಮಿಕ ಸಂದೇಶವನ್ನು ನೀಡುವ ಪೌರಾಣಿಕ ಪ್ರಸಂಗಗಳನ್ನು ಮಾತ್ರ ಬಯಲಾಟದಲ್ಲಿ ಪ್ರದರ್ಶನ ನೀಡುವುದು ಮೇಳದ ವಿಶೇಷವಾಗಿದೆ.
ಮೇಳದ ತಿರುಗಾಟಕ್ಕೆ ಶನಿವಾರ ಚಾಲನೆ ನೀಡಿ ಶುಭ ಹಾರೈಸಲಾಯಿತು.
ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು, ಶ್ರೀಮತಿ ಹೇಮಾವತಿ ವಿ. ಹೆಗ್ಗಡೆಯವರು, ಡಿ. ಹರ್ಷೇಂದ್ರ ಕುಮಾರ್ ಹಾಗೂ ಶ್ರೀಮತಿ ಸುಪ್ರಿಯಾ ಹೆಚ್. ಕುಮಾರ್ರವರು ಉಪಸ್ಥಿತರಿದ್ದರು.