ಕವಿತಾ ಟ್ರಸ್ಟ್ ಮಂಗಳೂರು ಸಂಸ್ಥಾಪಕ ಮೆಲ್ವಿನ್ ರೋಡ್ರಿಗಸ್ ಆಯ್ಕೆ
ಮುಂಬಯಿ (ಆರ್ಬಿಐ), ಮಾ.11: ಕೊಂಕಣಿ ಕವಿ, ಭಾಷಾ ಹೋರಾಟಗಾರ, ಕವಿತಾ ಟ್ರಸ್ಟ್ನ ಸಂಸ್ಥಾಪಕ ಮೆಲ್ವಿನ್ ರೋಡ್ರಿಗಸ್ ಮಂಗಳೂರು ಇವರನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ಕೊಂಕಣಿ ಸಲಹಾ ಮಂಡಳಿಯ ಸಂಚಾಲಕರಾಗಿ ಆಯ್ಕೆ ಮಾಡಲಾಗಿದೆ.
ಇಂದಿಲ್ಲಿ ಶನಿವಾರ ಹೊಸದಿಲ್ಲಿಯ ಸಾಹಿತ್ಯ ಅಕಾಡೆಮಿ ಕಚೇರಿಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ವಿವಿಧ ಭಾಷೆಗಳಿಂದ ಹೊಸದಾಗಿ ಚುನಾಯಿತರಾದ 99 ಸದಸ್ಯರು ಭಾಗವಹಿಸಿದ್ದು, ಸಾಹಿತ್ಯ ಅಕಾಡೆಮಿಯ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಲ್ಲಿ ಕೊಂಕಣಿ ಸಲಹಾ ಮಂಡಳಿಯ ಸಾರಥ್ಯಕ್ಕೆ ಗೋವಾದ ಹೊರಗಿನ ವ್ಯಕ್ತಿಯೋರ್ವರ ಆಯ್ಕೆಯಾಗಿದೆ. ಚುನಾವಣೆ ಮೂಲಕ ಮೆಲ್ವಿನ್ ರೋಡ್ರಿಗಸ್ ಅವರು ಮುಂದಿನ ಐದು ವರ್ಷಗಳ ಕಾಲಾವಧಿಗೆ ಸಾಹಿತ್ಯ ಅಕಾಡೆಮಿಯ ಕಾರ್ಯಕಾರಿ ಮಂಡಳಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಲಿದ್ದಾರೆ.
2023ರ ಜನವರಿಯಲ್ಲಿ ಮೆಲ್ವಿನ್ ಅವರನ್ನು ಸಾಹಿತ್ಯ ಅಕಾಡೆಮಿಯ ಸಾಮಾನ್ಯ ಮಂಡಳಿಗೆ ನಾಮನಿರ್ದೇಶನ ಮಾಡಲಾಗಿತ್ತು.. ಅಕಾಡೆಮಿಗೆ ಸಂಯೋಜಿತವಾಗಿರುವ ವಿವಿಧ ಕೊಂಕಣಿ ಸಂಸ್ಥೆಗಳಿಂದ ಪಡೆದ ಹಲವಾರು ಶಿಫಾರಸುಗಳಲ್ಲಿ ಮೆಲ್ವಿನ್ ಅವರ ಹೆಸರನ್ನು ನಿರ್ಗಮನ ಜನರಲ್ ಕೌನ್ಸಿಲ್ ಆಯ್ಕೆ ಮಾಡಿದೆ. ಗೋವಾದಿಂದ ಪೂರ್ಣಾನಂದ ಚಾರಿ ಅವರು ಸಾಮಾನ್ಯ ಮಂಡಳಿಗೆ ನಾಮ ನಿರ್ದೇಶನ ಗೊಂಡಿದ್ದು ಅವರು ಗೋವಾ ರಾಜ್ಯದಿಂದ ಅಕಾಡೆಮಿಗೆ ಕೊಂಕಣಿ ಭಾಷೆಯನ್ನು ಪ್ರತಿನಿಧಿಸುತ್ತಾರೆ.
ಮಂಗಳೂರು ದೇರೆಬೈಲ್ ಮೂಲತಃ ಚಾರ್ಲ್ಸ್ ಮತ್ತು ಥೆರೆಸಾ ರೋಡ್ರಿಗಸ್ (ಸ್ವರ್ಗೀಯರು) ಅವರ ಸುಪುತ್ರರಾಗಿರುವ ಮೆಲ್ವಿನ್ ರೋಡ್ರಿಗಸ್ ಇವರು ದೇರೆಬೈಲ್ನ ಹೋಲಿ ಫ್ಯಾಮಿಲಿ ಹೈಯರ್ ಪ್ರೈಮರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಹಾಗೂ ಮಂಗಳೂರು ಪದುವಾ ಹೈಸ್ಕೂಲ್ನಲ್ಲಿ ಪ್ರೌಢಶಿಕ್ಷಣ ಪೂರೈಸಿದ್ದು ಸೈಂಟ್ ಅಲೋಶಿಯಸ್ ಕಾಲೇಜ್ನಲ್ಲಿ ಪಿಯುಸಿ ನಂತರ ಎಸ್ಡಿಎಂ ಕಾಲೇಜ್ನಲ್ಲಿ ಬಿಬಿಎಂ ಪದವಿ ಮತ್ತು ಮೈಸೂರು ವಿಶ್ವವಿದ್ಯಾನಿಲಯದಿಂದ ಎಂಎ (ಸಮಾಜಶಾಸ್ತ್ರ) ಪದವಿ ಪಡೆದಿದ್ದಾರೆ. ವ್ಯವಹಾರ ನಿರ್ವಹಣೆಯಲ್ಲಿ ಪದವೀಧರರಾದ ಮೆಲ್ವಿನ್ ರೋಡ್ರಿಗಸ್ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರ ಆಗಿರುವರು. ವ್ಯವಹಾರದಲ್ಲೂ ಅಪಾರ ಅನುಭವ ಹೊಂದಿದ್ದು ಮಧ್ಯಪ್ರಾಚ್ಯದಲ್ಲಿ15 ವರ್ಷಗಳ ಕಾಲ ಅವಾಲಿಟಿ ಅಶ್ಯೂರೆನ್ಸ್ನಲ್ಲಿ ಲೆಕ್ಕಪರಿಶೋಧಕ ಆಗಿ ಕೆಲಸ ನಿರ್ವಹಿಸಿರುವರು. ಪ್ರಸ್ತುತ ಡೈಜಿವರ್ಲ್ಡ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ನ ನಿರ್ದೇಶಕರಾಗಿದ್ದು ಮುಖ್ಯ ಕಾರ್ಯಾನಿರ್ವಹಣಾ ಅಧಿಕಾರಿ ಆಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.
ಕವಿತಾ ಟ್ರಸ್ಟ್ನ ಸಂಸ್ಥಾಪಕ ಆಗಿರುವ ಮೆಲ್ವಿನ್ ತನ್ನ ಮುಂದಾಳುತ್ವದಲ್ಲಿ ಕಾವ್ಯದ ಕುರಿತು 220ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಆಯೋಜಿಸಿರುವರು. ಕವಿತಾ ಟ್ರಸ್ಟ್ ಈ ತನಕ 34 ಪುಸ್ತಕಗಳನ್ನು ಪ್ರಕಟಿಸಿದೆ. ಮೆಲ್ವಿನ್ ರೋಡ್ರಿಗಸ್ ಅವರು 1-ಕಾದಂಬರಿ, 6-ಕವನ ಸಂಗ್ರಹಗಳು, 3-ಅನುವಾದಗಳು, 2-ಪ್ರಬಂಧಗಳ ಸಂಗ್ರಹ, 6-ಸಂಪಾದಿತ ಕೃತಿಗಳು ಮತ್ತು 1-ಸಂಗೀತ ಆಲ್ಬಮ್ ಪ್ರಕಟಿಸಿದ್ದು ಕೊಂಕಣಿ ಸಮಾಜದ ಹಿರಿಯ ಕವಿ, ಸಾಹಿತಿಯಾಗಿ ಗುರುತಿಸಿ ಕೊಂಡಿದ್ದಾರೆ.