ಗುರುಗಳ ಆದರ್ಶ ಪಥದಲ್ಲಿ ಸಾಗೋಣ : ಗಂಗಾಧರ ಅಮೀನ್ ನಾಸಿಕ್
ಮುಂಬಯಿ, ಸೆ.29: ಬಿಲ್ಲವರ ಸೇವಾ ಸಂಸ್ಥೆ ನಾಸಿಕ್ ಸಂಸ್ಥೆಯು ಶ್ರೀ ನಾರಾಯಣ ಗುರುಗಳ 169ನೇ ಜಯಂತಿಯನ್ನು ಕಳೆದ ಭಾನುವಾರ (ಸೆ.24) ನಾಸಿಕ್ ಗಿರ್ನಾರೆ ಇಲ್ಲಿನ ಜಿಪಿ ಫಾರ್ಮ್ನ ಶ್ರೀ ನಾರಾಯಣ ಗುರು ಸಭಾಗೃಹದಲ್ಲಿ ಆಚರಿಸಿತು.
ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಜಯಾರಾಮ ಪೂಜಾರಿ ಅವರ ನೇತ್ರತ್ವದಲ್ಲಿ ಗುರು ಪಂಚಾಭಿಷೇಕ ಮತ್ತು ಗುರುಪೂಜೆ ನೇರವೇರಿಸಲಾಯಿತು. ಮಹಾ ಆರತಿ ಮತ್ತು ಮಹಾಪ್ರಸಾದ ವಿತರಣೆಯೊಂದಿಗೆ ಪೂಜೆ ಸಂಪನ್ನಗೊಂಡಿತು. ಸಾತ್ಪುರ ಇಲ್ಲಿನ ಶ್ರೀ ದುರ್ಗಾ ಪರಮೇಶ್ವರಿ ಭಜನಾ ಮಂಡಳಿ ಭಜನೆಯನ್ನಡಿತು. ಮಹಿಳಾ ಸಮಿತಿ ವತಿಯಿಂದ ಹಳದಿ ಕುಂಕುಮ ನೆರವೇರಿಸಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವಾರ್ಷಿಕ ಗುರು ಜಯಂತಿ ಅದ್ದೂರಿಯಾಗಿ ನಡೆಸಲ್ಪಟ್ಟಿತು.
ನಂತರ ಸಂಘದ ಅಧ್ಯಕ್ಷ ಗಂಗಾಧರ ಕೆ.ಅಮೀನ್ ಅಧ್ಯಕ್ಷತೆಯಲ್ಲಿ ಸಂಘದ ವಾರ್ಷಿಕ ಮಹಾಸಭೆ ನಡೆಸಿ ಬಳಿಕ ವಾರ್ಷಿಕ ದಿನಾಚರಣೆ ಸಂಭ್ರಮಿಸಲಾಯಿತು. ಕಾರ್ಯದರ್ಶಿ ದಾಮೋದರ ಪೂಜಾರಿ ವಾರ್ಷಿಕ ವರದಿಯನ್ನು ಮಂಡಿಸಿ ಸಂಘದ ಬೆಳವಣಿಗೆಯ ಯೋಜನೆಗಳ ಬಗ್ಗೆ ವಿವರ ನೀಡಿದರು. ಕೋಶಾಧಿಕಾರಿ ಬಾಲಚಂದ್ರ ಕೋಟ್ಯಾನ್ 2022-23 ವಾರ್ಷಿಕ ಲೆಕ್ಕಪತ್ರವನ್ನು ಮಂಡಿಸಿ ಒಪ್ಪಿಗೆ ಪಡೆದರು.
ಗಂಗಾಧರ ಅಮೀನ್ ಅವರು ಅಧ್ಯಕ್ಷೀಯ ಭಾಷಣಗೈದು ತತ್ವ ಆದರ್ಶಗಳನ್ನು ಮೈಗೂಡಿಸಿಕೊಂಡು ನಾವೆಲ್ಲರೂ ಆದರ್ಶ ಪಥದಲ್ಲಿ ಸಾಗಬೇಕು. ಯುವ ಜನತೆ ಅಭಿವೃದ್ಧಿ ಪಥದಲ್ಲಿ ಸಾಗುವಂತೆ ತಿಳುವಳಿಕೆ ಮೂಡಿಸಿ ಸಮಾಜದ ಉದ್ಧಾರಕ್ಕೆ ನೇರವಾಗಲು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಎಸ್ಎಸ್ಸಿ, ಹೆಚ್ಎಸ್ಸಿ, ಪದವಿಧರರಾಗಿ ಉತ್ತೀರ್ಣರಾದ ಪ್ರತಿಭಾನ್ವಿತ ವಿದ್ಯಾಥಿರ್sಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ವಿವಿಧ ಸದಸ್ಯರು ಕುಟುಂಬ ಸಮೇತ ಗಾಯನ, ಅಲಂಕಾರಿಕ ಉಡುಗೆ ಮತ್ತು ನೃತ್ಯ ಪ್ರದರ್ಶನಗಳಲ್ಲಿ ಪಾಲ್ಗೊಂಡರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸದ ಮಕ್ಕಳಿಗೆ ಬಹುಮಾನ ವಿತರಿಸಿದರು.
ಕಾರ್ಯಕ್ರಮದ ಅಂಗವಾಗಿ ಜನ ಕಲ್ಯಾಣ ರಕ್ತನಿಧಿ ಇವರ ಸಹಭಾಗಿತ್ವದಲ್ಲಿ ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿದ್ದು, ಸುಮಾರು 20 ಸದಸ್ಯರು ಸ್ವೈಚ್ಛೆಯಿಂದ ರಕ್ತದಾನ ನೀಡಿದರು. ಕಾರ್ಯಕ್ರಮದ ಯಶಸ್ವಿಗಾಗಿ ಶ್ರಮಿಸಿದ ಕಾರ್ಯಕಾರಿ ಸಮಿತಿ ಪದಾಧಿಕಾರಿಗಳು, ಸಾಂಸ್ಕೃತಿಕ ಸಮಿತಿ ಸದಸ್ಯರು, ಮಹಿಳಾ ವಿಭಾಗ ಹಾಗೂ ಯುವ ವಿಭಾಗ, ರಕ್ತದಾನಿಗಳು ಮತ್ತು ಸದಸ್ಯರೆಲ್ಲರಿಗೆ ದಾಮೋದರ ಪೂಜಾರಿ ಕೃತಜ್ಞತೆ ಸಲ್ಲಿಸಿದರು.