ಮುಂಬಯಿ, ನ.16: ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಕನ್ನಡ ಬಳಗ(ರಿ), ಮುಂಬಯಿ ಘಟಕದ ವತಿಯಿಂದ ಕರ್ನಾಟಕ ರಾಜ್ಯೋತ್ಸವವನ್ನು ಕಳೆದ ರವಿವಾರ ಮಾಟುಂಗದಲ್ಲಿನ ಮೈಸೂರು ಅಸೋಷಿಯೇಶನ್ ಸಭಾಂಗಣದಲ್ಲಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿsಗಳಾಗಿ ಖ್ಯಾತ ಜಾನಪದೀಯ ಅಶುಕವಿ, ಕರ್ನಾಟಕ ರಾಜ್ಯ ಪ್ರಶಸ್ತಿ ಪುರಸ್ಕೃತರು ಸಿದ್ದಪ್ಪ ಬಿದರಿ ಭಾಗವಹಿಸಿ ಮುಂಬಯಿನಲ್ಲಿ ಕನ್ನಡ ಕಲರವ ಮಾಡುತ್ತಿರುವ ಯೂನಿಯನ್ ಬ್ಯಾಂಕ್ ಕನ್ನಡ ಬಳಗದ ಕಾರ್ಯವನ್ನು ಶ್ಲಾಘಿಸಿದರು. ಬಳಗದ ಪ್ರಧಾನ ಕಾರ್ಯದರ್ಶಿ ಅರವಿಂದ್ ಹೆಗಡೆ ಮಾತನಾಡಿ ಬಳಗದ ಉದ್ಧೇಶವನ್ನು ವಿವರಿಸಿದರು. ಸಂಘದ ಪದಾಧಿಕಾರಿಗಳು ಆದ ನಿತಿನ್ ಬೀಳಗಿ ಅವರು ಜಾನಪದ ಸಾಹಿತಿ ಸಿದ್ದಪ್ಪ ಅವರನ್ನು ಪರಿಚಯಸಿ ಬಿದರಿ ಅವರು 1400ಕ್ಕೂ ಹೆಚ್ಚು ಜಾನಪದ ಕವಿತೆ ರಚಿಸಿ ಉತ್ತರ ಕರ್ನಾಟಕದ ಮನೆ ಮಾತಾಗಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಬಳಗದ ಸದಸ್ಯರು ಹಾಗೂ ಸಾಹಿತಿ, ನಾಟಕಕಾರ ಗೋಪಾಲ್ ತ್ರಾಸಿ ಅವರನ್ನು ಗೌರವಿಸಲಾಯಿತು. ಬ್ಯಾಂಕ್ನ ಮಹಾಪ್ರಬಂಧಕರಾದ ಮಂಜುನಾಥ್ ಹಾಗೂ ರಾಘವೇಂದ್ರ ಭಾಗವಹಿಸಿ ಎಲ್ಲರನ್ನು ಉತ್ತೇಜಿಸಿದರು.
ರವಿ ಹೊಸೂರ್ ಹಾಗೂ ನಿತಿನ್ ಬೀಳಗಿ ಕಾರ್ಯಕ್ರಮ ನಿರೂಪಣೆ ಮಾಡಿದರು. ಶ್ರೀಮತಿ ಶೃತಿ ಬೀಳಗಿ ಮತ್ತು ಶ್ರೀಮತಿ ದೀಪಾ ಪಾಟೀಲ್ ಹಾಗೂ ಅವರ ತಂಡ ಆಟೋಟ ಸ್ಪರ್ಧೆಗಳನ್ನು ನಡೆಸಿಕೊಟ್ಟರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಂಗೀತ, ಭರತನಾಟ್ಯ, ಹಾಸ್ಯ, ನೃತ್ಯ, ಇತ್ಯಾದಿಗಳನ್ನು ಪ್ರದರ್ಶಿಸಲಾಯಿತು. ವಿಜಯಕುಮಾರ್ ವಂದನಾರ್ಪಣೆಗೈದರು.