ಮಂಗಳೂರು:ಗೋಹತ್ಯೆ ವಿಚಾರವಾಗಿ ಹಿಂದೂಗಳು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ಗೋವು ಹಾಲು ನೀಡುವವರೆಗೆ ಅದನ್ನು ಸಾಕಿ ಬಳಿಕ ಅದನ್ನು ಕಟುಕರಿಗೆ ನೀಡುವ ಪ್ರವೃತ್ತಿಯನ್ನು ಬಿಡಿ ಎಂದು ವಿಶ್ವ ಹಿಂದೂ ಪರಿಷತ್ ಕೇಂದ್ರೀಯ ಮಾರ್ಗದರ್ಶಕ ಮಂಡಳಿ ಸದಸ್ಯೆ ಸಾಧ್ವಿ ಬಾಲಿಕಾ ಸರಸ್ವತಿ ಕರೆ ನೀಡಿದರು.ವಿಶ್ವ ಹಿಂದೂ ಪರಿಷತ್ ಸ್ವರ್ಣ ಜಯಂತಿ ಅಂಗವಾಗಿ ಸ್ವರ್ಣ ಜಯಂತಿ ಉತ್ಸವ ಹಾಗೂ ಹಿಂದೂ ಸಮಾಜೋತ್ಸವ ಸಮಿತಿ ಆಶ್ರಯದಲ್ಲಿ ಮಂಗಳೂರಿನ ಕೇಂದ್ರ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ಬೃಹತ್ ಹಿಂದೂ ಸಮಾಜೋತ್ಸವದಲ್ಲಿ ಸಾಧ್ವಿ ಬಾಲಿಕಾ ದಿಕ್ಸೂಚಿ ಭಾಷಣ ಮಾಡಿದರು. ಹಿಂದೂ ಶಕ್ತಿಯ ಸಶಕ್ತಿಕರಣದ ಮೂಲಕ ಭಾರತವನ್ನು ವಿಶ್ವ ಗುರು ಸ್ಥಾನಕ್ಕೇರಿಸಿ ದೀಕ್ಷೆಯನ್ನು ಸಮಸ್ತ ಹಿಂದೂ ಸಮಾಜ ತೊಡಬೇಕು.ಹಿಂದೂ ರಾಷ್ಟ್ರ ಉಗ್ರಗಾಮಿಗಳಿಗೆ ತಕ್ಕ ಉತ್ತರ ನೀಡಬೇಕು.ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ, ಗೋಹತ್ಯೆ ಸಂಪೂರ್ಣ ನಿಲ್ಲಿಸುವುದು, ಘರ್ ವಾಪಾಸಿ ಮೂಲಕ ಮತಾಂತರ ವಿರುದ್ಧ ಕ್ರಮ,ಲವ್ ಜಿಹಾದ್ ವಿರುದ್ಧ ಹೋರಾಟದ ಪಣವನ್ನು ನಾವು ತೊಡಬೇಕು.ಆ ಮೂಲಕ ಶಕ್ತಿ ಶಾಲಿ ಹಿಂದೂ ರಾಷ್ಟ್ರ ನಿರ್ಮಾಣಗೊಂಡು ಭಾರತ ಮರಳಿ ವಿಶ್ವ ಗುರು ಸ್ಥಾನಕ್ಕೆ ತಲುಪಲು ಸಾಧ್ಯ ಎಂದು ಅವರು ಹೇಳಿದರು.
ನಾವು ದೇಶಪ್ರೇಮಿಗಳು-ಕೋಮುವಾದಿಗಳಲ್ಲ; ಪೇಜಾವರ ಶ್ರೀ
ಸಮಾಜೋತ್ಸವ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಉಡುಪಿ ಶ್ರೀ ಪೇಜಾವರ ಮಠಾಧೀಶ,ವಿಶ್ವೇಶತೀರ್ಥ ಸ್ವಾಮೀಜಿ ಅವರು, ಸ್ವಧರ್ಮ ನಿಷ್ಠೆ,ಧರ್ಮಸಹಿಷ್ಣುತೆ ಇವು ಹಿಂದೂ ಧರ್ಮದ ಸಂದೇಶ, ಹಿಂದೂಗಳು ಎಂದಿಗೂ ಇತರ ಧರ್ಮಗಳ ಮೇಲೆ ದಾಳಿ ಮಾಡಿಲ್ಲ. ನಾವು ದೇಶಪ್ರೇಮಿಗಳೇ ಹೊರತು, ಕೋಮುವಾದಿಗಳಲ್ಲ ಎಂದರು.
ಸಮಾಜೋತ್ಸವ ಮುಂದಿನ ಭವಿಷ್ಯದ ದಿಕ್ಸೂಚಿ; ವೀರೇಂದ್ರ ಹೆಗ್ಗಡೆ
ಸಮಾಜೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವಿರೇಂದ್ರ ಹೆಗ್ಗಡೆಯವರು ಹಿಂದೂ ಸಮಾಜೋತ್ಸವ ಒಂದು ಕೇವಲ ಸಂಭ್ರಮವಲ್ಲ, ಬದಲಾಗಿ ಈ ದೊಡ್ಡ ಕಾರ್ಯಕ್ರಮ ಮುಂದಿನ ಭವಿಷ್ಯದ ದಿಕ್ಸೂಚಿ ಎಂದರು.
ಸಮಾಜೋತ್ಸವದಲ್ಲಿ ಶ್ರೀ ಕ್ಷೇತ್ರ ಕೊಲ್ಯಮಠದ ಶ್ರೀರಾಜಯೋಗಿ ರಮಾನಂದ ಸ್ವಾಮೀಜಿ, ಶ್ರೀ ಕ್ಷೇತ್ರ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ, ಮಾಣಿಲ ಶ್ರೀಧಾಮ ಶ್ರೀ ಧಾಮ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಮೊದಲಾದವರು ಉಪಸ್ಥಿತರಿದ್ದರು.
ಒಟ್ಟಾರೆ ಕಡಲ ನಗರಿ ಮಂಗಳೂರು ಭಾನುವಾರ ಸಂಪೂರ್ಣ ಕೇಸರಿಮಯವಾಗಿತ್ತು. ಭಾರತ್ ಮಾತಾ ಕೀ ಜೈ ಎನ್ನುವ ಘೋಷ ವಾಕ್ಯ ಎಲ್ಲೆಡೆ ಮೊಳಗಿ ಕೇಂದ್ರ ಮೈದಾನ ಸಂಪೂರ್ಣ ಕೇಸರಿ ಕಡಲಿನಂತೆ ಕಂಡು ಬಂತು.