ಚಿತ್ರ / ಮಾಹಿತಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಸೆ.03: ನಗರದ ಪ್ರತಿಷ್ಠಿತ ಗಣೇಶೋತ್ಸವ ಮಂಡಳಗಳಲ್ಲಿ ಒಂದಾಗಿರುವ ವಡಾಲದ ಜಿಎಸ್ಬಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯ 62ನೇ ಗಣೇಶೋತ್ಸವ ಸಂಭ್ರಮವು ಸೆ. 5 ರಿಂದ ಸೆ.15 ವರೆಗೆ ವಿವಿಧ ಧಾರ್ಮಿಕ, ಸಾಮಾಜಿಕ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ನಗರದಲ್ಲಿ ನೆಲೆಸಿರುವ ಮೂಲತ: ಕರ್ನಾಟಕ, ಗೋವಾ, ಕೇರಳ ಹಾಗೂ ಮಹಾರಾಷ್ಟ್ರದ ಕೊಂಕಣದಿಂದ ವಲಸೆ ಬಂದು ದೇವರು, ಗುರು-ಹಿರಿಯರ ಬಗ್ಗೆ ಶ್ರದ್ಧೆ, ಮಮತೆ, ಗೌರವವನ್ನೊಳಗೊಂಡು ವಿಘ್ನವಿನಾಶಕನನ್ನು ಅನಾದಿ ಕಾಲದಿಂದಲೂ ಭಕ್ತಿಯಿಂದ ಆರಾ„ಸುವ ಪರಿಪಾಠವನ್ನು ಗೌಡ ಸಾರಸ್ವತ ಬ್ರಾಹ್ಮಣರು ರೂಢಿಸಿಕೊಂಡು ಬಂದವರು. ಮುಂಬಯಿಯ ವಿವಿಧೆಡೆಗಳಲ್ಲಿ ಮಠ-ಮಂದಿರಗಳಲ್ಲಿ ಸಾರ್ವಜನಿಕ ಪರಿಸರಗಳಲ್ಲಿ ಗೌಡ ಸಾರಸ್ವತ ಬ್ರಾಹ್ಮಣ ವೃಂದದವರು ಐಕ್ಯತೆಯಿಂದ ಸೇರಿಕೊಂಡು ಗಣೇಶೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಆದರೆ ವಡಾಲದ ಗಣೇಶೋತ್ಸವವದ ಮೆರುಗು ಆಕರ್ಷಣೀಯ ಮತ್ತು ಮನಮೋಹಕ ಎಂದೇ ಹೇಳಬಹುದು. ವಡಾಲ ಶ್ರೀ ರಾಮ ಮಂದಿರದ ಶ್ರೀ ರಾಮ, ಲಕ್ಷ್ಮಣ, ಸೀತಾ ಮಾತೆಯ ಸಮ್ಮುಖದಲ್ಲಿರುವ ಮುಖ್ಯ ಪ್ರಾಣ ದೇವರ ಸಾನಿಧ್ಯವನ್ನು ಹೊಂದಿರುವ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ವಡಾಲದ ಶ್ರೀ ಗಣೇಶ ವಿಶ್ವವಿಖ್ಯಾತನೆಂದೆ ಪ್ರಸಿದ್ಧಿಯನ್ನು ಪಡೆದಿದ್ದು, ಪ್ರತಿವರ್ಷ ಲಕ್ಷಾಂತರ ಮಂದಿ ಭಕ್ತಾದಿಗಳು ಆಗಮಿಸಿ ದರ್ಶನ ಪಡೆಯುತ್ತಾರೆ.
ಪ್ರತಿಷ್ಠಾಪನೆ:
ಕವಳೆ ಮಠ, ಕಾಶಿ, ಗೋಕರ್ಣ ಹಾಗೂ ಚಿತ್ರಾಪುರ ಗುರುವರ್ಯರ ಕೃಪಾಶೀರ್ವಾದಗಳೊಂದಿಗೆ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀ ವಿದ್ಯಾಧಿರಾಜ ತೀರ್ಥ ಶ್ರೀಪಾದ ಒಡೇರ್ ಸ್ವಾಮೀಜಿ ಅವರ ಅನುಗ್ರಹ ಮತ್ತು ಆಶೀರ್ವಾದಗಳೊಂದಿಗೆ ಸೆ.5ರ ಸೋಮವಾರ ಬೆಳಿಗ್ಗೆ 7.00 ಗಂಟೆಗೆ ಮಂಗಳ ಮೂರ್ತಿಯ ಪ್ರಾಣಪ್ರತಿಷ್ಠೆಯೊಂದಿಗೆ ಗಣೇಶೋತ್ಸವ ಆರಂಭ ಗೊಳ್ಳಲಿದೆ. ಆನಂತರ 11 ದಿನಗಳ ಪರ್ಯಂತ ಈ ಉತ್ಸವವು ಅದ್ದೂರಿಯಾಗಿ ಜರಗಲಿದೆ.
ಭರದಿಂದ ಸಾಗುತ್ತಿದೆ ಸಿದ್ಧತೆ:
ಜಿಎಸ್ಬಿ ಸಾರ್ವಜನಿಕ ಉತ್ಸವ ಗಣೋಶ್ಸವ ಸಮಿತಿ ವಡಲಾ ಇದರ ವಿಶ್ವಸ್ಥ ಕಾರ್ಯಾಧ್ಯಕ್ಷ ಎನ್.ಎನ್ ಪಾಲ್ ಮತ್ತು ಉತ್ಸವ ಸಮಿತಿ ಅಧ್ಯಕ್ಷ ಉಲ್ಲಾಸ್ ಕಾಮತ್ ಅವರ ನೇತೃತ್ವದಲ್ಲಿ ನಡೆಯಲಿರುವ ಗಣೇಶೋತ್ಸವಕ್ಕೆ ಸಕಲ ಸಿದ್ಧತೆಗಳು ಭರದಿಂದ ಸಾಗುತ್ತಿದೆ. ಸ್ವಯಂ ಸೇವಕ ವೃಂದದವರು ಉಪ ಸಮಿತಿಗಳ ಸಂಚಾಲಕರು ಹಾಗೂ ವಿಶ್ವಸ್ಥ ಮಂಡಳಿಯ ಸದಸ್ಯರು ದ್ವಾರಕನಾಥ ಭವನವನ್ನು ತಳಿರು-ತೋರಣಗಳಿಂದ ಶೃಂಗಾರಯುಕ್ತ ಗೊಳಿಸುವಲ್ಲಿ ಮುಂದಾಗಿದ್ದಾರೆ. ಶ್ರೀವಿನಾಯಕ ಮಂಟಪ, ಆಸನ, ವೇದಿಕೆಯನ್ನು ಆಕರ್ಷಣೀಯವಾಗಿ ರಚಿಸಲಾಗಿದೆ.
ಶಾಸ್ತ್ರೋಕ್ತವಾಗಿ ನಡೆಯಲಿರುವ ಉತ್ಸವ:
62ನೇ ಗಣೇಶೋತ್ಸವವು ಶಾಸ್ತ್ರೋಕ್ತವಾಗಿ ನೆರವೇರಿಸಲು ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳು ಸೇರಿದಂತೆ ಕರ್ನಾಟಕ ರಾಜ್ಯದಾದ್ಯಂತ ಹಾಗೂ ಗೋವಾ ಪ್ರಾಂತ್ಯಗಳಿಂದ ವೈಧಿಕೋತ್ತಮರು, ನೂರಾರು ಭಕ್ತಾದಿಗಳು, ಸಮಾಜ ಬಾಂಧವರು ವಡಾಲದ ಗಣಪತಿಯನ್ನು ಕಣ್ತುಂಬಿಕೊಳ್ಳಲು ಆಗಮಿಸಲಿದ್ದಾರೆ.
ಉತ್ಸವದಲ್ಲಿ ವಿವಿಧ ಸೇವೆಗಳು:
ಹನ್ನೊಂದು ದಿನಗಳ ಕಾಲ ಸೇವಾದಾರರಿಗೆ ಮತ್ತು ಸಮಾಜ ಬಾಂಧವರಿಗೆ ವಿವಿಧ ಧಾರ್ಮಿಕ ವಿಧಿ, ವಿಧಾನಗಳನ್ನು ಸೇವಾರೂಪದಲ್ಲಿ ಕಲ್ಪಿಸಲಾಗಿದೆ. ಗಣಹೋಮ, ಮಹಾಸಂತಾರ್ಪಣೆ, ಮಹಾಪೂಜೆ, ಸರ್ವಾಂಲಂಕಾರ, ಅಪೂರ್ವ ನೈವೇದ್ಯ, ಮೂಢಗಣಪತಿ, ತುಲಾಭಾರ, ದೂರ್ವಾರ್ಪಣ ಸೇವೆಗಳನ್ನು ಅಪರಾಹ್ನದೊಳಗೆ ಆಯೋಜಿಸಲಾಗಿದೆ. ಮಧ್ಯಾಹ್ನ 1.30 ರಿಂದ ಪ್ರತಿದಿನ ದೇವರಿಗೆ ಮಹಾಆರತಿ, ತೀರ್ಥ ಪ್ರಸಾದ ವಿತರಣೆ, ರಂಗಪೂಜೆ, ಪುಷ್ಪ ಪೂಜೆ, ಸಂಜೆ ಸೇವೆಗಳು, ರಾತ್ರಿ ಪೂಜೆಯೊಂದಿಗೆ ಪ್ರತಿದಿನ ವೈವಿಧ್ಯಮಯ ಪೂಜಾ ಕೈಂಕರ್ಯಗಳು ಜರಗಲಿವೆ.
ಸಾಂಸ್ಕøತಿಕ ಕಾರ್ಯಕ್ರಮಗಳ ಮೇಳೈಕೆ:
ದಿನಂಪ್ರತಿ ರಾತ್ರಿ 9 ರಿಂದ ಸಾಂಸ್ಕøತಿಕ ಕಾರ್ಯಕ್ರಮವಾಗಿ ಕೊಂಕಣಿ ನಾಟಕ, ಸಂಗೀತ, ಶಾಸ್ತ್ರೀಯ ಸಂಗೀತ, ಭರತನಾಟ್ಯ ಹೀಗೆ ವಿವಿಧ ವಿನೋದಾವಳಿಗಳನ್ನು ಹಮ್ಮಿಕೊಳ್ಳಲಾಗಿದೆ. ಸೆ. 11 ರಂದು ಭಗವತ್ ಗೀತಾ ಅಧ್ಯಾಯನದ ಭಾಗ-12 ರ ಪ್ರಸ್ತುತಿ ಸ್ಪರ್ಧೆ ಆಯೋಜಿಸಲಾಗಿದೆ. ಭಾಗವಹಿಸುವವರು ಹೆಸರನ್ನು ಸೆ. 10 ರೊಳಗೆ ನಮೂದಿಸತಕ್ಕದ್ದು. ಜಿಎಸ್ಬಿ ಮೆಡಿಕಲ್ ಟ್ರಸ್ಟ್ ದಾದರ್ನ ವತಿಯಿಂದ ಸೆ. 11 ರಂದು ಬೆಳಗ್ಗೆ ಹೆಲ್ದಿ ಬೇಬಿ ಕಾಂಟೆಸ್ಟ್ ಹಮ್ಮಿಕೊಳ್ಳಲಾಗಿದೆ. 1 ವರ್ಷದಿಂದ 3 ವರ್ಷದೊಳಗಿನ ಸಮಾಜದ ಚಿಣ್ಣರು ಪ್ರವೇಶ ಪತ್ರವನ್ನು ಸೆ.10 ರಂದು ಮಧ್ಯಾಹ್ನ 12 ರೊಳಗೆ ನೀಡತಕ್ಕದ್ದು.
ಆರೋಗ್ಯ ಭಾಗ್ಯ ಸೇವೆ, ಪ್ರತಿಭಾ ಪುರಸ್ಕಾರ:
ಶ್ರೀ ಗಣೇಶೋತ್ಸವ ಸಮಿತಿಯು ಧಾರ್ಮಿಕ ಸೇವೆಯೊಂದಿಗೆ ಜನ ಸೇವೆಯನ್ನು ಮಾಡುತ್ತಿದೆ. ಜನಸೇವೆಯೇ ಜನಾರ್ಧನಾ ಸೇವೆ ಎಂಬ ನಾಣ್ಣುಡಿಯಂತೆ ಜ್ಞಾನ, ಆಧ್ಯಾತ್ಮಿಕ, ಸಾಂಸ್ಕøತಿಕ ಹಾಗೂ ಸಮಾಜ ಕಲ್ಯಾಣಕ್ಕೋಸ್ಕರ ನಿಸ್ವಾರ್ಥ ಸೇವೆ ಸಲ್ಲಿಸುತ್ತಾ ಬಂದ ಶ್ರೀ ರಾಮಮಂದಿರದ ಉತ್ಸವದಲ್ಲಿ ಬರುವ ದೇಣಿಗೆಯ ಉಳಿದ ನಿಧಿಯನ್ನು ಸಾಮಾಜಿಕ, ಶೈಕ್ಷಣಿಕ, ಸಾಂಸ್ಕøತಿಕ, ವೈದ್ಯಕೀಯ ಕ್ಷೇತ್ರಗಳಿಗೆ ಧಾರೆ ಎರೆಯುತ್ತಿದೆ. ಸಮಾಜಕ್ಕೆ ಆರೋಗ್ಯ ಭಾಗ್ಯವನ್ನು ಕಲ್ಪಿಸುವ ಉದ್ಧೇಶದಿಂದ ಆರೋಗ್ಯ ತಪಾಸಣಾ ಶಿಬಿರವನ್ನು ಸೆ.13 ರಂದು ಆಯೋಜಿಸಲಾಗಿದೆ. ಸೆ.11 ರಂದು ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಸಮಾಜದ ಪ್ರತಿಭಾವಂತ ವಿದ್ಯಾಥಿರ್üಗಳಿಗೆ ಪ್ರತಿಭಾ ಪುರಸ್ಕಾರ, ಆಥಿರ್üಕವಾಗಿ ಸಮಾಜದ ವಿದ್ಯಾಥಿರ್üಗಳಿಗೆ ವಿದ್ಯಾಥಿರ್ü ವೇತನ ವಿತರಣೆ ನಡೆಯಲಿದೆ.
ವಿವಿಧತೆಯಲ್ಲಿ ಏಕತೆ:
ವಡಾಲ ಗಣೇಶೋತ್ಸವದ ಇನ್ನೊಂದು ವಿಶೇಷತೆ ಎಂದರೆ ಇಲ್ಲಿ ಎಲ್ಲಾ ಧರ್ಮದ ಭಕ್ತಾದಿಗಳು ದೇವರ ದರ್ಶನ ಪಡೆಯುತ್ತಿದ್ದಾರೆ. ಪ್ರತಿದಿನ ಬೆಳಗ್ಗೆಯಿಂದ ರಾತ್ರಿಯವರೆಗೆ ಸಾವಿರಾರು ಸಂಖ್ಯೆಯ ಭಕ್ತಾದಿಗಳು ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆಯುತ್ತಾರೆ. ಗಣೇಶ ಮೂರ್ತಿಯನ್ನು ಬಹಳ ಹತ್ತಿರದಿಂದ ವೀಕ್ಷಿಸಿ, ಪ್ರಾರ್ಥಿಸಲು ಇಲ್ಲಿ ಅನುವು ಮಾಡಿಕೊಡಲಾಗಿದೆ. ಇನ್ಕಂ ಟ್ಯಾಕ್ಸ್ ಅಧಿನಿಯಮ 80ಜಿ ಅಂತರ್ಗತ ಟ್ರಸ್ಟ್ಗೆ ಅನುದಾನ ನೀಡುವವರಿಗೆ, ನೀಡಿದವರಿಗೆ ಅಥವಾ ಹೆಸರು ನೋಂದಾಯಿಸಲು ಸಮಿತಿಯ ಕಚೇರಿ (24121535) ಯನ್ನು ಸಂಪರ್ಕಿಸಬಹುದು. ಪೂಜೆ, ಸೇವೆ, ಅಥವಾ ಇನ್ನಿತರ ಮಾಹಿತಿಗಳ ಕುರಿತು ವಿಶ್ವಸ್ಥ ಕಾರ್ಯದರ್ಶಿ ಮುಕುಂದ್ ವೈ.ಕಾಮತ್ ಅವರನ್ನು ಸಂಪರ್ಕಿಸಬಹುದು. ಈ ಹನ್ನೊಂದು ದಿನಗಳ ವೈಭವೋತ್ಸವದಲ್ಲಿ ಸಮಾಜ ಬಾಂಧವರು, ತುಳು-ಕನ್ನಡಿಗರು, ಭಕ್ತಾದಿಗಳು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗುವಂತೆ ಸಂಚಾಲಕ ಮಂಡಳಿ ವಕ್ತಾರ ಕಮಲಾಕ್ಷ ಸರಾಫ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.