ಮಂಗಳೂರು: ಕರಾವಳಿಯಾದ್ಯಂತ ಮಂಗಳವಾರ ತಡರಾತ್ರಿ ಸುರಿದ ಗುಡುಗು ಸಹಿತ ಮಳೆಯ ರೌದ್ರಾವತಾರಕ್ಕೆ ಸಿಡಿಲು ಬಡಿದು ಮಲಗಿದಲ್ಲೇ ವಿದ್ಯಾರ್ಥಿ ಮೃತಪಟ್ಟ ಘಟನೆ ಮೂಡಬಿದ್ರೆ ಬಳಿಯ ಪಣಪಿಲದಲ್ಲಿ ನಡೆದಿದೆ. ಮೃತಪಟ್ಟ ವಿದ್ಯಾರ್ಥಿಯನ್ನು ಲವಲೇಶ್ (೧೫) ಎಂದು ಗುರುತಿಸಲಾಗಿದೆ. ಲವಲೇಶ ಅಳಿಯೂರು ಸರ್ಕಾರಿ ಪ್ರೌಢ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿ. ಲವಲೇಶ್ ಕೂಲಿ ಕಾರ್ಮಿಕ ಗುಮ್ಮಣ್ಣ ಪೂಜಾರಿ ಎಂಬವರ ಪುತ್ರನಾಗಿದ್ದು, ರಾತ್ರಿ ಊಟ ಮಾಡಿ ಮಲಗಿದ್ದ. ಮಲಗಿದ್ದಲ್ಲೇ ಆತನಿಗೆ ಸಿಡಿಲು ಬಡಿದು ಅಲ್ಲೇ ಮೃತಪಟ್ಟಿದ್ದಾನೆ. ಈ ಪರಿಸರದಲ್ಲಿ ಮಂಗಳವಾರ ರಾತ್ರಿ ಸಿಡಿಲು, ಮಿಂಚು ಸಹಿತ ಭಾರೀ ಮಳೆ ಸುರಿದಿದೆ. ವಿದ್ಯುತ್ ಸಂಪರ್ಕ ಕೂಡಾ ಕಡಿತಗೊಂಡಿದೆ.
ಆದರೆ ಇನ್ನೊಂದೆಡೆ ಬಿಸಿಲ ಧಗೆಗೆ ತತ್ತರಿಸಿ ಹೋಗಿದ್ದ ಜನರಿಗೆ ನಿನ್ನೆ ಸುರಿದ ಮಳೆ ಹರ್ಷ ಮೂಡಿಸಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಹಲವೆಡೆ ರಾತ್ರಿ ಸುಮಾರು 11ರ ವೇಳೆಗೆ ಆರಂಭಗೊಂಡ ಗುಡುಗು ಸಹಿತ ಧಾರಾಕಾರ ಮಳೆ, ಜಿಲ್ಲೆಯ ಜನರಲ್ಲಿ ಸಂತಸ ಮೂಡಿಸಿದೆ. ಜಿಲ್ಲೆಯ ಕುಂಬ್ರ, ಬಿ.ಸಿ.ರೋಡು, ಬಂಟ್ವಾಳ, ಪುತ್ತೂರು, ಉಳ್ಳಾಲ, ಸುರತ್ಕಲ್ , ಮೂಡಬಿದಿರೆ ಸೇರಿದಂತೆ ಬಹುತೇಕ ಕಡೆ ಮಳೆಯಾಗಿದೆ. ಹೀಗೆ ಮಳೆಯಾದರೆ ತುಂಬೆ ಮತ್ತು ಎಎಂಆರ್ ಡ್ಯಾಂಗಳಲ್ಲಿ ನೀರಿನ ಮಟ್ಟ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಲಿದೆ.ಮಂಗಳೂರಿನ ಜನರಿಗೆ ಕುಡೀಯುವ ನೀರಿನ ಸಮಸ್ಯೆ ದೂರವಾಗಲಿದೆ.