ಮಂಗಳೂರು: ರಾಷ್ಟ್ರೀಯ ಹೆದ್ದಾರಿ ೭೫ರಲ್ಲಿ ಶಿರಾಡಿ ಘಾಟಿಯ ಅಡ್ಡಹೊಳೆಯಿಂದ ಬಿ.ಸಿ.ರೋಡ್ ವರೆಗಿನ ಸುಮಾರು ೬೩ ಕಿ.ಮೀ. ದೂರದ ಮಾರ್ಗವನ್ನು ಚತುಷ್ಪಥ ಕಾಂಕ್ರೀಟ್ ರಸ್ತೆಯನ್ನಾಗಿ ಪರಿವರ್ತಿಸುವ ಕಾಮಗಾರಿಗೆ ಚಾಲನೆ ದೊರೆತಿದೆ. ಬೆಂಗಳೂರು-ಮಂಗಳೂರು ನೇರ ಸಂಪರ್ಕ ಕಲ್ಪಿಸುವ ಈ ರಾ.ಹೆ. ಯಲ್ಲಿ ಅಡ್ಡಹೊಳೆಯಿಂದ ಬಿ.ಸಿ.ರೋಡ್ ವರೆಗಿನ ದ್ವಿಪಥ ರಸ್ತೆಯನ್ನು ನಾಲ್ಕು ಪಥಗಳ ರಸ್ತೆಯನ್ನಾಗಿ ಮೇಲ್ದರ್ಜೆಗೇರಿಸಬೇಕೆಂಬುದು ಬಹುದಿನಗಳ ಬೇಡಿಕೆಯಾಗಿದೆ.
ಅದರಂತೆ ಈ ಹೆದ್ದಾರಿಯನ್ನು ವಿಸ್ತರಿಸುವ ಕಾಮಗಾರಿಗೆ ಚಾಲನೆ ದೊರೆತಿದ್ದು, ಮುಂದಿನ ೨ ವರ್ಷದೊಳಗೆ ಕಾಮಗಾರಿ ಪೂರ್ಣಗೊಳ್ಳಬೇಕಿದೆ. ಸದ್ಯ ಗುಂಡ್ಯದಿಂದ ಉಪ್ಪಿನಂಗಡಿವರೆಗೆ ರಸ್ತೆಗೆ ಹೊಂದಿಕೊಂಡಿರುವ ಮರಗಳ ತೆರವು, ವಿದ್ಯುತ್ ಕಂಬಗಳು, ನೀರು ಹಾಗೂ ಇತರ ಕೊಳವೆ ಮಾರ್ಗಕ್ಕೆ ಪರ್ಯಾಯ ವ್ಯವಸ್ಥೆ ನಡೆಯುತ್ತಿದೆ.