ಮಂಗಳೂರು: ಉಳ್ಳಾಲ ಮೊಗವೀರಪಟ್ಣದ ಸಮುದ್ರ ಕಿನಾರೆಯಲ್ಲಿ ಸಮುದ್ರ ಪಾಲಾಗುತ್ತಿದ್ದ ಬೆಂಗಳೂರು ಅನೆಪಾಳ್ಯ ಮೂಲದ ಒಂದೇ ಕುಟುಂಬದ ಏಳು ಜನರನ್ನು ಸ್ಥಳೀಯ ಈಜುಗಾರರು ರಕ್ಷಿಸಿದ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದ್ದು, ಸಮುದ್ರದಲ್ಲಿ ಮುಳುಗಿ ಗಂಭೀರ ಸ್ಥಿತಿಯಲ್ಲಿ ಮೂವರು ಉಳ್ಳಾಲದ ಖಾಸಗಿ ಆಸ್ಪತ್ರೆಯಲ್ಲಿ ಚೇತರಿಸಿಕೊಂಡಿದ್ದಾರೆ.ಬೆಂಗಳೂರು ಆನೆಪಾಳ್ಯ ನಿವಾಸಿಗಳಾದ ರೆಹಮಾನ್ ಶರೀಫ್ (27) ಅವರ ಪತ್ನಿ ಯಾಸ್ಮಿನ್ ತಾಜ್ (22), ಆಕೆಯ ಸಹೋದರಿ ತಸ್ಮಿಯಾ ತಾಜ್ (16) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದು, ಸಮುದ್ರದಲ್ಲಿ ಮುಳುಗಿದ್ದ ಉಳಿದ ನಾಲ್ವರಿಗೆ ಸ್ಥಳೀಯರೇ ಪ್ರಥಮ ಚಿಕಿತ್ಸೆ ನೀಡಿದ್ದರು.
ಘಟನೆಯ ವಿವರ: ರೆಹಮಾನ್ ಶರೀಫ್ ಅವರ 9 ಜನರ ಕುಟುಂಬ ಬೆಳಗ್ಗೆ ಉಳ್ಳಾಲ ದರ್ಗಾ ವೀಕ್ಷಿಸಿ ಬಳಿಕ ಮಧ್ಯಾಹ್ನದ ವೇಳೆಗೆ ಮೊಗವೀರಪಟ್ಟಣದ ಸಮುದ್ರ ಕಿನಾರೆಗೆ ಆಗಮಿಸಿತ್ತು. ಸಮುದ್ರದಲ್ಲಿ ಆಟವಾಡುತ್ತಿದ್ದಾಗ ಸಮುದ್ರದ ಅಲೆಗೆ ಇಬ್ಬರು ಮಕ್ಕಳು ಸಮುದ್ರ ಪಾಲಾಗಿದ್ದು, ಅವರನ್ನು ರಕ್ಷಿಸುವ ನಿಟ್ಟಿನಲ್ಲಿ ಕುಟುಂಬದ ಇತರ ಸದಸ್ಯರು ಸಮುದ್ರಕ್ಕೆ ಹಾರಿದ್ದು, ಈ ಸಂದರ್ಭದಲ್ಲಿ ಅಲೆಗಳ ನಡುವೆ ಸಿಲುಕಿ ಬೊಬ್ಬೆ ಹಾಕಲಾರಂಭಿಸಿದರು. ಬೊಬ್ಬೆ ಕೇಳಿ ಸ್ಥಳೀಯ ಈಜುಗಾರರು ಸಮುದ್ರಕ್ಕೆ ಧುಮುಕಿ ಸಮುದ್ರ ಪಾಲಾಗುತ್ತಿದ್ದವರನ್ನು ರಕ್ಷಿಸಿದ್ದಾರೆ.