ಮಂಗಳೂರು: ರಾಜ್ಯದಲ್ಲಿ ಮಾರುತಿ ಆಮ್ನಿ ವಾಹನವನ್ನು ಆ್ಯಂಬುಲೆನ್ಸ್ ಆಗಿ ಬಳಕೆ ಮಾಡುವುದನ್ನು ನಿಷೇಧಿಸಿ ಸರಕಾರ ಆದೇಶ ಹೊರಡಿಸಿದೆ. ಆದರೆ ಸದ್ಯಕ್ಕೆ ಚಾಲ್ತಿಯಲ್ಲಿರುವ ಆಮ್ನಿ ಮಾದರಿಯ ಆ್ಯಂಬುಲೆನ್ಸ್ಗಳ ಸೇವೆ ಯಥಾ ಸ್ಥಿತಿ ಮುಂದುವರಿಯಲಿದೆ. ಈ ಹಿನ್ನೆಲೆಯಲ್ಲಿ ಆ್ಯಂಬುಲೆನ್ಸ್ ಆಗಿ ಆಮ್ನಿ ವಾಹನಗಳನ್ನು ಬಳಸುತ್ತಿರುವುದರ ವಿರುದ್ಧ ಇದೀಗ ರಾಜ್ಯದೆಲ್ಲೆಡೆ ಸಾರಿಗೆ ಇಲಾಖೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.
ಈ ಕಾರಣಕ್ಕೆ ಇನ್ನು ಮುಂದೆ ರಾಜ್ಯದಲ್ಲಿ ಯಾವುದೇ ಹೊಸ ಆಮ್ನಿ ವಾಹನವನ್ನು ಆ್ಯಂಬುಲೆನ್ಸ್ ಸೇವೆಗೆ ಬಳಸಿಕೊಳ್ಳಲು ನೋಂದಣಿ ಮಾಡದಿರಲು ಸಾರಿಗೆ ಇಲಾಖೆ ನಿರ್ಧರಿಸಿದೆ. ಹೀಗಾಗಿ ಇದೀಗ ದ. ಕ. ಜಿಲ್ಲೆಯ ಮಂಗಳೂರು ಮತ್ತು ಪುತ್ತೂರಿನ ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ ಆ್ಯಂಬುಲೆನ್ಸ್ ಬಳಕೆ ಉದ್ದೇಶಕ್ಕಾಗಿ ನೋಂದಣಿಯಾಗಿರುವ ಸುಮಾರು 180ರಷ್ಟು ಮಾರುತಿ ಆಮ್ನಿ ವಾಹನಗಳ ಮಾಲಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಾರುತಿ ಆಮ್ನಿ ಹೊಸ ಆ್ಯಂಬುಲೆನ್ಸ್ ವಾಹನದ ನೋಂದಣಿಯನ್ನು ಮತ್ತು ಈಗಾಗಲೇ ಇರುವ ಮಾರುತಿ ಆಮ್ನಿ ಆ್ಯಂಬುಲೆನ್ಸ್ಗಳ ನವೀಕರಣ ಮಾಡದಿರುವಂತೆ ಕಳೆದ ಮೇ 10ರಂದೇ ರಾಜ್ಯ ಸರಕಾರ ಆದೇಶ ಹೊರಡಿಸಿದ್ದು, ಈ ಆದೇಶ ಮಂಗಳೂರಿನ ಪ್ರಾದೇಶಿಕ ಸಾರಿಗೆ ಕಚೇರಿಗೆ ಇತ್ತೀಚೆಗೆ ತಲುಪಿದೆ.