ಮಂಗಳೂರು: ಮಂಗಳೂರು ಹೊರವಲಯದ ಉಳ್ಳಾಲ ಠಾಣಾ ವ್ಯಾಪ್ತಿಯ ಮೊಗವೀರಪಟ್ಣ ಸಮೀಪ ಸಮುದ್ರ ಮಧ್ಯದಲ್ಲಿ ಶನಿವಾರ ಅಪರಾಹ್ನ ಅಪಾಯಕ್ಕೆ ಸಿಲುಕಿದ್ದ ಕಡಲ ಕೊರೆತ ತಡೆಗೋಡೆ ನಿರ್ಮಾಣ ಕಾಮಗಾರಿ ನಿರತ ಬಾರ್ಜ್ನಲ್ಲಿ 27 ಮಂದಿಯನ್ನು ಸತತ ಕಾರ್ಯಾಚರಣೆ ನಡೆಸಿ ಭಾನುವಾರ ಬೆಳಗ್ಗೆ ರಕ್ಷಣೆ ಮಾಡಲಾಗಿದೆ.
ಶನಿವಾರ ಉಳ್ಳಾಲ ಮೊಗವೀರಪಟ್ಣದ ಸಮುದ್ರ ತೀರದಿಂದ ಒಂದು ಕಿಲೋ ಮೀಟರ್ ದೂರದಲ್ಲಿ ಬಂಡೆಗೆ ಡಿಕ್ಕಿ ಹೊಡೆದು ಬಾರ್ಜ್ ಅಪಾಯಕ್ಕೆ ಸಿಲುಕಿಕೊಂಡಿತ್ತು. ಎಡಿಬಿ ಯೋಜನೆಯಡಿಯಲ್ಲಿ 223 ಕೋಟಿ ವೆಚ್ಚದಲ್ಲಿ ಕಡಲ್ಕೊರೆತ ತಡೆಗೋಡೆ ನಿರ್ಮಾಣ ಕಾಮಾಗಾರಿಗಾಗಿ ಈ ಬಾರ್ಜ್ ಬಂದಿತ್ತು. ಬಾರ್ಜ್ ಸಮುದ್ರ ಮಧ್ಯದಲ್ಲಿ ಅಪಾಯಕ್ಕೆ ಸಿಲುಕಿದ್ದರಿಂದ ಅದರಲ್ಲಿದ್ದ 27 ಮಂದಿ ಅಪಾಯಕ್ಕೆ ಸಿಲುಕ್ಕಿಕೊಂಡಿದ್ದರು.ಕೋಸ್ಟ್ಗಾರ್ಡ್ ಮತ್ತು ಅಧಿಕಾರಿಗಳ ಪ್ರಕಾರ ಬಾರ್ಜ್ ಭಾಗಶಃ ಹಾನಿಗೊಂಡಿದ್ದು, ಬಾರ್ಜ್ನೊಳಗೆ ನೀರು ನುಗ್ಗಿಲ್ಲ. ಬಾರ್ಜ್ ಮುಳುಗಡೆಯಾಗದು ಎಂದು ಅಧಿಕಾರಿಗಳು ಹೇಳಿದ್ದು ಬಾರ್ಜನ್ನೂ ಎಳೆದು ತರುವ ಕಾರ್ಯಾಚರಣೆ ನಡೆಯುತ್ತಿದೆ.