ಮಂಗಳೂರು: ಸುಬ್ರಹ್ಮಣ್ಯ ಸಮೀಪದ ಏನೆಕಲ್ ಬಳಿ ನದಿ ನೀರಲ್ಲಿ ಮುಳುಗಿ ಮಾವ ಮತ್ತು ಅಳಿಯ ಸಾವನ್ನಪ್ಪಿದ್ದಾರೆ. ಏನೆಕಲ್ ಗ್ರಾಮದ ಬಾನಡ್ಕ ನಿವಾಸಿ ಆನಂದ ಗೌಡ (65) ಹಾಗೂ ಅಳಿಯ ಆನೆಗುಂಡಿ ನಿವಾಸಿ ಸುನಿಲ್ ಗೌಡ (30) ಮೃತ ದುರ್ದೈವಿಗಳು. ಶುಕ್ರವಾರ ಬೆಳಿಗ್ಗೆ ಆನಂದ ಗೌಡರ ಅಳಿಯ ಸುನಿಲ್ ಗೌಡ ತನ್ನ ಪತ್ನಿ, ಪುಟ್ಟ ಮಗುವನ್ನು ಕರೆದುಕೊಂಡು ಬೆಂಗಳೂರಿನಿಂದ ಮನೆಗೆ ಆಗಮಿಸಿದ್ದರು.
ಸಂಜೆ ವೇಳೆಗೆ ಅಳಿಯ ಮತ್ತು ಮಾವ ಇಬ್ಬರೂ ಜೊತೆಗೆ ತೋಟಕ್ಕೆ ತೆರಳಿದ್ದರು. ಮನೆ ಸಮೀಪದ ಏನೆಕಲ್ ಹೊಳೆಗೆ ಅಳವಡಿಸಿದ ನೀರಾವರಿ ಪಂಪಿನಲ್ಲಿ ನೀರು ಬರುವುದಿಲ್ಲ ಎಂದು ಆನಂದ ಅವರು ಸುನಿಲನಿಗೆ ತಿಳಿಸಿದ್ದರು. ಹೀಗಾಗಿ ಇಬ್ಬರೂ ಕೂಡಾ ಪಂಪ್ ಸರಿಪಡಿಸಲು ಮುಂದಾಗಿದ್ದರು. ಈ ವೇಳೆ ನೀರಿಗೆ ಇಳಿದ ಸುನಿಲ್ ಕಾಲುಜಾರಿ ಬಿದ್ದಿದ್ದು, ಕೂಡಲೇ ಅಳಿಯನನ್ನು ರಕ್ಷಿಸಲು ಮಾವ ಧಾವಿಸಿದಾಗ ಅವರೂ ಕೂಡಾ ನೀರಿನಲ್ಲಿ ಮುಳುಗಿ ಇಬ್ಬರೂ ಸಾವನ್ನಪ್ಪಿದ್ದಾರೆ.
ಆನಂದ ಗೌಡರು ಏನೆಕಲ್ ಗ್ರಾಮದಲ್ಲಿ ಉತ್ತಮ ಕೃಷಿಕರು. ಅಲ್ಲದೆ ಇಲ್ಲಿನ ಏನೆಕಲ್ ಶ್ರೀ ಶಂಖಪಾಲ ಸುಬ್ರಹ್ಮಣ್ಯ ಹಾಗೂ ಬಚ್ಚನಾಯಕ, ಉಳ್ಳಾಕುಲು-ಉಳ್ಳಾಳ್ತಿ ದೇವಸ್ಥಾನದ ಮಾಗಣೆ ಗೌಡರಾಗಿಯೂ ಕಾರ್ಯನಿರ್ವಹಿಸುತ್ತಿದ್ದರು. ಮೃತರಿಗೆ ಪತ್ನಿ, ಇಬ್ಬರು ಹೆಣ್ಣು, ಒಂದು ಗಂಡು ಮಕ್ಕಳಿದ್ದಾರೆ. ಮೂರು ವರ್ಷಗಳ ಹಿಂದೆ ಹಿರಿಯ ಪುತ್ರಿಗೆ ಆನೆಗುಂಡಿ ಸುನಿಲ್ ಗೌಡ ಅವರೊಂದಿಗೆ ವಿವಾಹ ಮಾಡಿಕೊಟ್ಟಿದ್ದರು. ಇನ್ನು, ಘಟನೆ ಕುರಿತಂತೆ ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.