ಮಂಗಳೂರು: ಕಳೆದ ಮೂರು ವರ್ಷಗಳಲ್ಲಿ ಅಭಿವೃದ್ಧಿಯ ಕಾರಣಕ್ಕಾಗಿ 140 ಮರಗಳನ್ನು ಕಡಿಯಲಾಗಿದೆ. ಇದರಿಂದ ಆಗಿರುವ ನಷ್ಟವನ್ನು ಸರಿತೂಗಿಸಲು ಮಹಾನಗರ ಪಾಲಿಕೆ ವ್ಯಾಪ್ತಿಯ 60 ವಾರ್ಡ್ ಗಳಲ್ಲಿ ಕನಿಷ್ಠ ತಲಾ 25ರಂತೆ ಒಟ್ಟು 1,500 ಗಿಡಗಳನ್ನು ನೆಡುವ ಮೂಲಕ ಪರಿಸರ ಸಮತೋಲನ ಕಾಪಾಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಮೇಯರ್ ಕವಿತಾ ಸನಿಲ್ ತಿಳಿಸಿದ್ದಾರೆ.
ಜೂನ್ 5ರಂದು ಮಂಗಳೂರಿನ ಪುರಭವನದಲ್ಲಿ ಸಾಂಕೇತಿಕವಾಗಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಬಳಿಕ ಆಯಾ ವಾರ್ಡ್ ನ ಸದಸ್ಯರ ಮಾರ್ಗದರ್ಶನದಲ್ಲಿ ಆರೋಗ್ಯ ನಿರೀಕ್ಷಕರು ಈ ಗಿಡ ನೆಡುವ ಕಾರ್ಯಕ್ರಮವನ್ನು ನಡೆಸಲಿದ್ದಾರೆ ಎಂದವರು ಹೇಳಿದರು.ದೇಶದಲ್ಲಿನ 4041 ನಗರ ಪ್ರದೇಶಗಳಲ್ಲಿ ಮೂಲದಲ್ಲೇ ತ್ಯಾಜ್ಯವನ್ನು ಹಸಿ ಹಾಗೂ ಒಣ ಕಸವಾಗಿ ಬೇರ್ಪಡಿಸಲು ಉದ್ದೇಶಿಸಲಾಗಿದೆ. ಇದರಂದು ಜೂ. 5ರಂದು ಮನಪಾ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ಪೌರ ಕಾರ್ಮಿಕರಿಗೆ ಪ್ರತಿಜ್ಞೆ ನೀಡು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮೇಯರ್ ಹೇಳಿದರು.