ಮಂಗಳೂರು: ಕರಾವಳಿಗೆ ಶುಕ್ರವಾರ ಮುಂಗಾರು ಆಗಮನವಾಗಿದೆ. ಆ ಮೂಲಕ ಅಧಿಕೃತವಾಗಿ ಮಳೆಗಾಲ ಆರಂಭವಾಗಿದೆ. ದ.ಕ. ಜಿಲ್ಲೆಯ ವಿವಿಧೆಡೆ ಬೆಳಗ್ಗೆಯಿಂದಲೇ ನಿರಂತರ ಮಳೆ ಸುರಿದಿದ್ದು, ಇಳೆ ತಂಪಾಗಿದೆ. ಮಂಗಳೂರು, ಉಡುಪಿಯಲ್ಲಿ ಕಳೆದೆರಡು ದಿನಗಳಿಂದ ಮಳೆ ಬಂದರೂ ಶುಕ್ರವಾರ ದಿನವಿಡೀ ನಿರಂತರ ಸುರಿದಿದೆ.
ಬಿಡದೇ ಸುರಿದ ಮಳೆಯಿಂದಾಗಿ ಸಾರ್ವಜನಿಕರಿಗೆ ತೊಂದರೆಯಾಯಿತು. ಅಲ್ಲಲ್ಲಿ ರಸ್ತೆಯಲ್ಲಿನ ಗುಂಡಿಗಳಲ್ಲಿ ನೀರು ತುಂಬಿಕೊಂಡಿದ್ದು ತಿಳಿಯದೇ, ದ್ವಿಚಕ್ರ ವಾಹನ ಸವಾರರಿಗೆ ಸಮಸ್ಯೆಯಾಯಿತು. ನಂತೂರು ಬಳಿ ರಸ್ತೆ ಬದಿ ನೀರು ತುಂಬಿಕೊಂಡ ಹೊಂಡದೊಳಗೆ ರಿಕ್ಷಾವೊಂದು ಹೂತು ಹೋಗಿ ಚಾಲಕ ಪರದಾಡುವಂತಾಯಿತು.ಬೆಳ್ತಂಗಡಿ, ಸುಳ್ಯ, ಮೂಡಬಿದಿರೆಯಲ್ಲಿ ಸಣ್ಣ ಪ್ರಮಾಣದ ಮಳೆ ಬಂದಿದೆ. ಬಂಟ್ವಾಳದಲ್ಲಿ ಆಗಾಗ ಗಾಳಿ ಸಹಿತ ಸಾಧಾರಣ ಮಳೆ ಸುರಿದಿದೆ.