ಉಜಿರೆ: ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಹಾಗೂ ನಾಟಕ ಕಲಾವಿದ ಕೆ. ಜೆ. ಕೊಕ್ರಾಡಿ (66)(ಕೆ. ಜಿನೇಂದ್ರ ಹೆಗ್ಡೆ, ಕೊಕ್ರಾಡಿ) ಸೋಮವಾರ ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಮೂಲತಃ ನಾರಾವಿ ಬಳಿ ಕೊಕ್ರಾಡಿ ನಿವಾಸಿಯಾದ ಅವರು ಧರ್ಮಸ್ಥಳದಲ್ಲಿ ಪ್ರಾಥಮಿಕ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿ ಬಳಿಕ ಬಡ್ತಿಗೊಂಡು ಉಜಿರೆಯಲ್ಲಿರುವ ಎಸ್.ಡಿ.ಎಂ. ಕನ್ನಡ ಮಾಧ್ಯಮ ಪ್ರೌಢ ಶಾಲೆಗೆ ವರ್ಗಾವಣೆಗೊಂಡರು. ಇಲ್ಲಿ ಮೂವತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತರಾಗಿದ್ದರು.
ಸ್ವತಃ ನಾಟಕ ಕಲಾವಿದರಾಗಿದ್ದ ಅವರು ಅನೇಕ ನಾಟಕ ಕೃತಿಗಳ ರಚನೆ ಮಾಡಿದ್ದರು. ಅವರು ರಚಿಸಿದ ತುಳು ನಾಟಕ ಕೃತಿಗೆ ಧರ್ಮಸ್ಥಳ ರತ್ನವರ್ಮ ಹೆಗ್ಗಡೆ ಸ್ಮಾರಕ ಪುರಸ್ಕಾರ ಲಭಿಸಿದೆ.
ಉಜಿರೆಯಲ್ಲಿ ತಾಲ್ಲೂಕು ಮಟ್ಟದ, ಜಿಲ್ಲಾ ಮಟ್ಟದ ಹಾಗೂ ರಾಜ್ಯ ಮಟ್ಟದ ಕ್ರೀಡಾ ಕೂಟಗಳನ್ನು ಯಶಸ್ವಿಯಾಗಿ ಸಂಘಟಿಸುವಲ್ಲಿ ಅವರು ಶ್ರಮಿಸಿದ್ದರು. ಪಿ.ಟಿ. ಮಾಸ್ಟ್ರು ಎಂದೇ ಚಿರಪರಿಚಿತರಾದ ಅವರು ಶಾಲೆಯಲ್ಲಿ ಶಿಸ್ತು ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಶಿಸ್ತಿನ ಸಿಪಾಯಿ, ಉತ್ತಮ ನಾಟಕ ಕಲಾವಿದ, ನಿರ್ದೇಶಕ ಹಾಗೂ ಸಂಘಟಕರಾಗಿ ಎಲ್ಲರೊಂದಿಗೆ ಸ್ನೇಹಶೀಲರಾಗಿದ್ದರು. ಕೊಕ್ರಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮೊಕ್ತೇಸರರಾಗಿಯೂ ಅವರು ಸೇವೆ ಸಲ್ಲಿಸಿದ್ದಾರೆ.
ಅವರಿಗೆ ಪತ್ನಿ ಸಬಿತಾ, ಕಾರ್ಕಳ ಮತ್ತು ಇಬ್ಬರು ಪುತ್ರಿಯರು ದೀಪ್ತಿ ಮತ್ತು ದೀಕ್ಷಾ ಇದ್ದಾರೆ. ಕೊಕ್ರಾಡಿಯಲ್ಲಿ ಅವರ ಅಂತ್ಯ ಸಂಸ್ಕಾರ ನಡೆಸಲಾಯಿತು.