ಚೆಂಬೂರು ಛೆಡಾ ನಗರದ ಶ್ರೀ ಸುಬ್ರಹ್ಮಣ್ಯ ಮಠದಲ್ಲಿ ನಾಗರಪಂಚಮಿ ಆಚರಣೆ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ ಜು.27: ಚೆಂಬೂರು ಛೆಡಾ ನಗರದ ಶ್ರೀ ಸುಬ್ರಹ್ಮಣ್ಯ ಮಠದ ನಾಗ ಸುಬ್ರಹ್ಮಣ್ಯ ದೇವರ ಸನ್ನಿಧಿಯಲ್ಲಿ ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾಸಂಸ್ಥಾನಮ್ ಶ್ರೀ ಸಂಪುಟ ನರಸಿಂಹಸ್ವಾಮಿ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಮಠದ ಮಠಾಧೀಶ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಅವರ ಆಶೀರ್ವಾದ ಹಾಗೂ ಮಾರ್ಗದರ್ಶನದೊಂದಿಗೆ ಶಾಸ್ತ್ರೋಕ್ತವಾಗಿ ಇಂದಿಲ್ಲಿ ಸ್ವಸ್ತೀ ಶ್ರೀ ಹೇಮಲಂಬಿನಾಮ ಸಂವತ್ಸರದ ಶ್ರಾವಣ ಶುದ್ಧ ಪಂಚಮಿ ದಿನದಿ ಬೆಳಿಗ್ಗೆಯಿಂದ ನಾಗರ ಪಂಚಮಿಯನ್ನು ವಿಜೃಂಭನೆಯಿಂದ ಆಚರಿಸಲ್ಪಟ್ಟಿತು.
ಮಠದ ಪ್ರಧಾನ ವ್ಯವಸ್ಥಾಪಕ ವಿಷ್ಣು ಕಾರಂತ್ ಅವರ ಸಾರಥ್ಯದಲ್ಲಿ ನಾರವಿ ಗುರುರಾಜ್ ಭಟ್, ಪ್ರಸಾದ್ ಭಟ್, ಕೃಷ್ಣ ಭಟ್, ಕೃಷ್ಣರಾಜ ಉಪಾಧ್ಯಾಯ, ವಾಸುದೇವ ವೈಲಾಯ, ಶ್ರೀಧರ್ ಭಟ್ ವಿವಿಧ ಪೂಜೆಗಳನ್ನು ನೆರವೇರಿಸಿ ಪ್ರಸಾದ ವಿತರಿಸಿ ನೆರೆದ ಸದ್ಭಕ್ತರನ್ನು ಹರಸಿದರು. ಪೆರಂಪಳ್ಳಿ ಬಾಲಕೃಷ್ಣ ಭಟ್ ಮತ್ತು ಬಾಲಚಂದ್ರ ಭಟ್ ಪರಿವಾರ ಅತ್ಯಾಕರ್ಷಕ ನಾಗರಂಗೋಲಿ ರಚಿಸಿದ್ದರು.
ಬೆಳಿಗ್ಗೆಯಿಂದ ನೂರಾರು ಭಕ್ತಾಧಿಗಳು ಮಠಕ್ಕಾಗಮಿಸಿ ನಾಗದೇವರಿಗೆ ಪೂಜೆ ಸಲ್ಲಿಸಿದರು. ಮುಂಜಾನೆಯಿಂದ ಪವಮಾನ ಹೋಮ, ಅಭಿಷೇಕ, ಸಂತಾನ, ಆರೋಗ್ಯ, ಸಂಪತ್ತು ಪ್ರಾಪ್ತಿಗಾಗಿ ಸಾಮೂಹಿಕ ಆಶ್ಲೇಷಾ ಬಲಿ, ನವಕ ಪ್ರಧಾನ ಕಲಶ, ಸರ್ಪಕೋಪ, ಸರ್ಪಶಾಪ ಪರಿಹಾರರ್ಥ ಸರ್ಪತ್ರಯ ಮಂತ್ರ ಹೋಮ, ಮಹಾಭಿಷೇಕ, ಅಲಂಕಾರ, ಮಹಾಪೂಜೆ, ತೀರ್ಥ ಪ್ರಸಾದ ಮತ್ತು ಅನ್ನಸಂತರ್ಪಣೆ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಾಗರ ಪಂಚಮಿ ಸಂಭ್ರಮಿಸಲ್ಪಟ್ಟಿತು.