ಮಂಗಳೂರು: ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣ ಒಂದೆಡೆ ವಿಶ್ವದರ್ಜೆಯ ಕನಸು ಕಾಣುತ್ತಿದೆ. ಇನ್ನೊಂದೆಡೆ ಇರುವ ಕಟ್ಟಡಗಳ ಭಾಗಗಳು ಬೀಳುತ್ತಾ ಪ್ರಯಾಣಿಕರಲ್ಲಿ ಆತಂಕ ಸೃಷ್ಠಿಸಿದೆ. ಅಭಿವೃದ್ಧಿಯ ಮೆಟ್ಟಿಲೇರಬೇಕಿದ್ದ ರೈಲು ನಿಲ್ದಾಣ ಇದೀಗ ಸಮಸ್ಯೆಗಳ ಆಗರವಾಗಿ ಬಿಟ್ಟಿದೆ. ರೈಲು ನಿಲ್ದಾಣದ ಮುಖ್ಯ ಪ್ರವೇಶ ದ್ವಾರದಲ್ಲಿ ಗುರುವಾರ ಟಿಕೆಟ್ ಕೌಂಟರ್ ಬಳಿಯ ಛಾವಣಿ ಹಾಗೂ ಶುಕ್ರವಾರ ಆರ್ಪಿಎಫ್ ಕಟ್ಟಡ ಸಹಿತ ಕೆಲವು ಕಡೆ ಸಿಮೆಂಟ್ ಪ್ಲಾಸ್ಟರಿಂಗ್ ಕಳಚಿ ಬಿದ್ದು ಇನ್ನಷ್ಠು ಆತಂಕ ಸೃಷ್ಟಿಸಿತು.
ಸೆಂಟ್ರಲ್ ರೈಲು ನಿಲ್ದಾಣವನ್ನು ವಿಶ್ವದರ್ಜೆಗೇರಿಸುವ ಪ್ರಸ್ತಾವನೆ ರೂಪುಗೊಂಡು ಹಲವು ವರ್ಷಗಳಾಗಿದ್ದು ಇನ್ನೂ ಸಾಕಾರಗೊಂಡಿಲ್ಲ. ಬೆಂಗಳೂರು ಸಿಟಿ (ಬೈಯಪ್ಪನಹಳ್ಳಿ), ಮಂಗಳೂರು, ದಕ್ಷಿಣ ರೈಲ್ವೇಯ ಚೆನ್ನೈ ಸೆಂಟ್ರಲ್, ತಿರುವನಂತಪುರಂ ಸೆಂಟ್ರಲ್ ಹಾಗೂ ದೇಶದ ಪ್ರಮುಖ ನಿಲ್ದಾಣಗಳಾದ ಸಿಎಸ್ಟಿ ಮುಂಬಯಿ, ಪುಣೆ, ನಾಗಪುರ, ಹೊಸದೆಹಲಿ, ಕೋಲ್ಕತ್ತಾ ಸಹಿತ 50 ನಿಲ್ದಾಣಗಳನ್ನು 2009- 10ರ ಕೇಂದ್ರ ರೈಲ್ವೇ ಬಜೆಟ್ನಲ್ಲಿ ವಿಶ್ವದರ್ಜೆ ಮಟ್ಟಕ್ಕೇರಿಸಲು ಗುರುತಿಸಲಾಗಿತ್ತು.
ಆದರೆ ಅಲ್ಲಿ ಲಭ್ಯವಿರುವ ಜಾಗದಲ್ಲಿ ವಿಶ್ವದರ್ಜೆಯ ಮಾನದಂಡಕ್ಕನುಗುಣವಾಗಿ ರೈಲ್ವೆನಿಲ್ದಾಣ ಅಭಿವೃದ್ದಿ ಕಷ್ಟ ಎಂಬ ವಾದವೂ ಇತ್ತು. ಒಟ್ಟಾರೆಯಾಗಿ ಅತ್ತ ವಿಶ್ವದರ್ಜೆ ನಿಲ್ದಾಣವಾಗಿ ಇದು ಮೇಲ್ದ ರ್ಜೆಗೇರುತ್ತಿಲ್ಲ. ಇದ್ದ ವ್ಯವಸ್ಥೆಯ ಸುಧಾರಣೆಯೂ ಆಗುತ್ತಿಲ್ಲ.ಈ ಬಗ್ಗೆ ರೈಲ್ವೇ ಪ್ರಯಾಣಿಕರು ತಮ್ಮ ಅಸಮಾಧಾನ ಹೊರಹಾಕುತ್ತಿದ್ದಾರೆ.