ಮಂಗಳೂರು: ರಾಜ್ಯದಲ್ಲಿನ ಅಡುಗೆ ಅನಿಲ ರಹಿತರೆಲ್ಲರಿಗೂ 'ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಯಡಿ ಉಚಿತ ಅಡುಗೆ ಅನಿಲ ಸಂಪರ್ಕ ಕಲ್ಪಿಸಲಾಗುವುದು ಎಂದು ಸಚಿವ ಯು.ಟಿ ಖಾದರ್ ಅವರು ಗುರುವಾರದಂದು ಘೋಷಿಸಿದ್ದಾರೆ. ಮಂಗಳೂರು ಸರ್ಕ್ಯೂಟ್ ಹೌಸ್ನಲ್ಲಿ ಕರೆದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಯೋಜನೆಯ ಫಲಾನುಭವಿಗಳಿಗೆ 1940 ರೂ. ಬೆಲೆಯ ಅಡುಗೆ ಅನಿಲ ಸಂಪರ್ಕದೊಂದಿಗೆ 999 ರೂ. ವೌಲ್ಯದ 2 ಬರ್ನರ್ ಗ್ಯಾಸ್ ಸ್ಟ್ವವ್ ಉಚಿತವಾಗಿ ನೀಡಲಾಗುವುದು.
ಬಿಪಿಎಲ್ ಮತ್ತು ಅಂತ್ಯೋದಯ ಪಡಿತರ ಚೀಟಿ ಹೊಂದಿದ ಕುಟುಂಬದ ಮಹಿಳೆಯು ತನ್ನ ಹೆಸರಿನಲ್ಲಿ ಈ ಯೋಜನೆಯನ್ನು ಪಡೆದುಕೊಳ್ಳಬಹುದು ಎಂದರು.18 ವರ್ಷದ ಮೇಲ್ಪಟ್ಟ ಮಹಿಳಾ ಸದಸ್ಯರು (ಮಹಿಳೆಯರಿಲ್ಲದಿದ್ದರೆ 18 ವರ್ಷ ಮೇಲ್ಪಟ್ಟ ಪುರುಷರು) ತಮ್ಮ ಮನೆಯ ಎಲ್ಲಾ ಸದಸ್ಯರ ಆಧಾರ್ ಕಾರ್ಡ್ ಸಂಖ್ಯೆಯೊಂದಿಗೆ ಖಾಸಗಿ ಫ್ರಾಂಚೈಸಿ ಕೇಂದ್ರ, ತಾಲೂಕು ಕಚೇರಿ, ಗ್ರಾಮ ಪಂಚಾಯತ್ ಕಚೇರಿ, ಜನಸ್ನೇಹಿ ಕೇಂದ್ರ, ಬೆಂಗಳೂರು ಒನ್/ ಕರ್ನಾಟಕ ಒನ್ ಕೇಂದ್ರಗಳಲ್ಲಿ 20 ರೂ. ಪಾವತಿಸಿ ಅರ್ಜಿ ಸಲ್ಲಿಸಬಹುದು.
ಪರಿಶೀಲನೆಯ ಬಳಿಕ 15 ದಿನದೊಳಗೆ ಅಡುಗೆ ಅನಿಲ ಸಂಪರ್ಕ ಕಲ್ಪಿಸಲಾಗುವುದು ಎಂದರು. ಇನ್ನು, ಕೇಂದ್ರ ಸರಕಾರ ಎಲ್ಲರಿಗೂ ಈ ಯೋಜನೆಯ ಪ್ರಯೋಜನ ಕಲ್ಪಿಸಿದ್ದರೆ ರಾಜ್ಯ ಸರಕಾರ ಮತ್ತೆ ಮುಖ್ಯಮಂತ್ರಿಗಳ ಅಡುಗೆ ಅನಿಲ ಯೋಜನೆ ಜಾರಿಗೊಳಿಸುವ ಅವಶ್ಯಕೆಯಿರಲಿಲ್ಲ ಎಂದು ಹೇಳಿದರು.