ಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸುದೀರ್ಘ ವರ್ಷಗಳಿಂದ ಗೃಹ ಬಳಕೆ ಸೇರಿದಂತೆ ವಿವಿಧ ಮೂಲಗಳಿಂದ ಸುಮಾರು 20.64 ಕೋಟಿ ರೂ. ನೀರಿನ ಶುಲ್ಕ ಪಾಲಿಕೆಗೆ ಪಾವತಿಗೆ ಬಾಕಿ ಇದೆ.
ಈ ಬಾಕಿಯನ್ನು ಮುಂದಿನ 15 ದಿನಗಳೊಳಗೆ ಸಂಬಂಧಪಟ್ಟವರು ಪಾವತಿಸದಿದ್ದಲ್ಲಿ, ಅವರ ನೀರಿನ ಸಂಪರ್ಕವನ್ನು ಕಡಿತಗೊಳಿಸಿ ಹೆಸರನ್ನು ಪತ್ರಿಕೆಗಳಲ್ಲಿ ಪ್ರಕಟಿಸಲಾಗುವುದು ಎಂದು ಮೇಯರ್ ಕವಿತಾ ಸನಿಲ್ ಎಚ್ಚರಿಕೆ ನೀಡಿದ್ದಾರೆ.
ಗುರುವಾರ ಪಾಲಿಕೆ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನೀರಿನ ಶುಲ್ಕ ಪಾವತಿಗೆ ಬಾಕಿ ಇರುವುದರಿಂದ ಆದಾಯದ ಕೊರತೆ ಇದ್ದು ಅಭಿವೃದ್ಧಿ ಕಾಮಗಾರಿಗಳಿಗೆ ತೊಡಕಾಗುತ್ತಿದೆ. ಆದ್ದರಿಂದ ಸಾರ್ವಜನಿಕರು ಪ್ರಾಮಾಣಿಕವಾಗಿ ತಮ್ಮ ನೀರಿನ ಶುಲ್ಕವನ್ನು ಪಾವತಿಸಬೇಕು ಎಂದರು.