ಮಂಗಳೂರು : 'ಹಗಲಿನಲ್ಲಿ ನಿಮಗೆ ಸಮಯ ಇರಲ್ಲ, ರಾತ್ರಿ ನಿಮಗೆ ಏನು ಕೆಲಸ ಇದೆ?. ರಾತ್ರಿ ಇಸ್ಪೀಟ್ ಆಡ್ತೀರಾ?, ನಿಮಗೆ ರಾಜ್ಯಭಾರ ಮಾಡೋಕೆ ಆಗಲ್ವಾ?' ಎಂದು ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ'.
ಶನಿವಾರ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಜನಾರ್ದನ ಪೂಜಾರಿ ಅವರು, 'ಕರ್ನಾಟಕದಲ್ಲಿ ಭೀಕರ ಬರಗಾಲವಿದೆ. ಮುಖ್ಯಮಂತ್ರಿಗಳಿಗೆ ಬರಪೀಡಿತ ಪ್ರದೇಶಗಳಿಗೆ ಭೇಟಿ ಕೊಡುವುದಕ್ಕೆ ಸಮಯವಿಲ್ಲ. ರಾಜ್ಯಭಾರ ಮಾಡೋಕೆ ಆಗದಿದ್ದರೆ, ರಾಜೀನಾಮೆ ನೀಡಿ' ಎಂದು ಒತ್ತಾಯಿಸಿದರು.'ಕರ್ನಾಟಕದ ಜನರು ನಿಮ್ಮ ಉತ್ತರ ನಿರೀಕ್ಷೆಯಲ್ಲಿದ್ದಾರೆ. ನಿಮಗೆ ಕಾಲ ಸನ್ನಿಹಿತವಾಗಿದೆ.
ಡಿ.ಕೆ.ಶಿವಕುಮಾರ್ ನಿಮಗಿಂತ ಪ್ರಬಲರಾಗುತ್ತಿದ್ದಾರೆ. ರಾಜ್ಯದ ಮುಂದಿನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್. ನೀವು ನಿದ್ದೆಯಿಂದ ಎಚ್ಚೆತ್ತುಕೊಳ್ಳದಿದ್ದರೆ ತುಂಬಾ ಕಷ್ಟವಿದೆ' ಎಂದು ಹೇಳಿದರು. 'ಅಮಿತ್ ಶಾ ಕರ್ನಾಟಕ್ಕೆ ಬಂದಿದ್ದಾರೆ. ಅವರು ಬಂದಿರುವುದು ನಿಮ್ಮನ್ನು ಕೆಳಗಿಳಿಸೋಕೆ. ಹದಿನೆಂಟು ರಾಜ್ಯಗಳಿಗೆ ಅವರು ಭೇಟಿ ನೀಡಿದ್ದಾರೆ. ಅಲ್ಲಿ ಮುಖ್ಯಮಂತ್ರಿಗಳನ್ನು ಕೆಳಗಿಳಿಸಿದ್ದಾರೆ. ಸಂಜೆಯೊಳಗೆ ರಾಜೀನಾಮೆ ಕೊಡಿ. ಹೈಕಮಾಂಡ್ ದಲಿತರನ್ನು ಮುಖ್ಯಮಂತ್ರಿ ಮಾಡಲಿ' ಎಂದರು.