ತಾಳ್ಮೆ, ಏಕಾಗ್ರತೆ, ವ್ಯವಧಾನ, ಹುಮ್ಮಸ್ಸುಗಳಿದ್ದಲ್ಲಿ ಮಾತ್ರ ಕಲೆ ಒಲಿದು,ಬೆಳೆದು, ಬೆಳಗಬಲ್ಲುದು ಎಂಬುದಕ್ಕೆ ಮೂಡುಬಿದಿರೆ ರತ್ನಾಕರ ರಾಯರೇ ಸಾಕ್ಷಿ.ಗಂಜಿಮಠದ ಹೆಂಚಿನ ಕಾರ್ಖಾನೆಯಿಂದ ತಂದ ಮಣ್ಣನ್ನು ಹದಗೊಳಿಸಿ ಬಹಳ ಜಾಗರೂಕತೆಯಿಂದ ತನ್ನ ಕೈಯಾರೆ ಬೇಕಾದ ರೂಪಕ್ಕೆ ಪರಿವರ್ತಿಸಿ ನಿರ್ಮಿಸುವ ಗಣೇಶನ ವಿಗ್ರಹ ಎಲ್ಲರಿಗೂ ಸಿದ್ಧಿಸುವದಿಲ್ಲ.ದಕ್ಷಿಣ ಕನ್ನಡದ ಮೂಡುಬಿದಿರೆಯ ದೊಡ್ಮನೆ ರಸ್ತೆಯ ಶ್ರೀ ಚಂದ್ರಶೇಖರ ದೇವಾಲಯದ ಅರ್ಚಕ ಮೊಕ್ತೇಸರರಾದ ಶ್ರೀ ರತ್ನಾಕರ ರಾಯರು 1988 ರಲ್ಲಿ ದೇವಾಲಯದಲ್ಲಿದ್ದ ಗಣಪತಿ ವಿಗ್ರಹ ಭಿನ್ನವಾದಾಗ ಸ್ವತಃ ಮಣ್ಣಿನ ಗಣಪತಿ ಮಾಡಿ ಅರ್ಚಿಸಲು ಪ್ರಾರಂಭಿಸಿದರು.
ತರುವಾಯದ ವರ್ಷ ಗಳಲ್ಲಿ ಹತ್ತಿರದ ಮನೆಗಳವರು ಇವರು ರಚಿಸಿದ ವಿಗ್ರಹವನ್ನು ಕಂಡು ತಮಗೂ ನಿರ್ಮಿಸಿಕೊಡುವಂತೆ ಕೋರಿಕೊಂಡ ಪ್ರಯುಕ್ತ ಪ್ರಾರಂಭವಾಯ್ತು ಇವರ ಗಣೇಶ ವಿಗ್ರಹ ರಚನಾ ಕಾರ್ಯ. ಪ್ರತೀ ವರ್ಷ ಶ್ರೀ ಶ್ರಿಂಗೇರಿ ಜಗದ್ಗುರುಗಳನ್ನು ನೆನೆದು ಪ್ರಾರಂಭಿಸುತ್ತಿದ್ದ ವಿಗ್ರಹ ರಚನಾ ಕಾರ್ಯ ಇತಿಮಿತಿ ಗೆ ಅನುಗುಣವಾಗಿ ಬೆಳೆಯುತ್ತಾಬಂದು ಇದೀಗ ಈ ವರ್ಷ ಒಟ್ಟು14ವಿಗ್ರಹಗಳು ರಚನೆಗೊಂಡಿವೆ.
ಇಂತಹ ರತ್ನಾಕರ ರಾಯರು ನಮ್ಮ ಮೂಡುಬಿದ್ರೆಯವರೆನ್ನುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ. ಇವರು ರಚಿಸಿದ ಗಣೇಶನ ವಿಗ್ರಹಗಳಿಗೆ ಬಣ್ಣ ಕೊಡುವ ಕಾರ್ಯದಲ್ಲಿ ಸ್ವತಃ ಕಲೆಯಲ್ಲಿ ಆಸಕ್ತಿ ತೋರುತ್ತಿರುವ ಅವರ ಮುದ್ದಿನ ಮೊಮ್ಮಗ ಅಭಿಷೇಕ್ ಸಹಕರಿಸುತ್ತಿರುವುದನ್ನು ಅವರು ಕೊಂಡಾಡುತ್ತಾರೆ. ಈ ವರ್ಷದ ಹೆಚ್ಚಿನ ಎಲ್ಲಾ ವಿಗ್ರಹಗಳಿಗೆ ಬಣ್ಣ ನೀಡಿದ್ದು ಆತನೇ ಎಂದು ಹೆಮ್ಮೆಯಿಂದ ಹೇಳುತ್ತಾರೆ.
ಕಳೆದ ಎರಡು ವರ್ಷಗಳಲ್ಲಿ ಶಾರದಾ ಮಾತೆಯ ವಿಗ್ರಹವನ್ನು ಕೂಡಾ ನಿರ್ಮಿಸಿದ್ದಾಗಿ ಅವರು ಹೇಳಿದ್ದಾರೆ. ಹಿಂದಿನ ವರುಷ ಪುತ್ತಿಗೆ ಸಾರ್ವಜನಿಕ ಗಣೇಶೋತ್ಸವ ಸಮಿತಿಯಿಂದ ಸಮ್ಮಾನ ಪಡೆದ ಇವರ ಕಾರ್ಯ ಇನ್ನಷ್ಟು ಬೆಳಗಲಿ, ಉತ್ತರೋತ್ತರ ಶ್ರೇಯಸ್ಸು, ಸುಖ.ಶಾಂತಿ, ನೆಮ್ಮದಿ, ಬಾಳಲ್ಲಿ ಒದಗಲೆಂದು ಸದಾಶಯಗಳು.
ಸಚಿತ್ರ ಲೇಖನ-ರಾಯೀ ರಾಜ್ ಕುಮಾರ್, ಮೂಡುಬಿದಿರೆ.