ಮಂಗಳೂರು: ಮಂಗಳೂರಿನ ಐಜಿಪಿ ವಸತಿಗೃಹದ ಆವರಣದಿಂದ ಶ್ರೀಗಂಧದ ಮರಗಳು ರಾಜಾರೋಷವಾಗಿ ಕಳವಾಗಿರುವ ಘಟನೆ ಅರಣ್ಯ ಸಚಿವ ರಮಾನಾಥ ರೈ ಅವರಿಗೆ ಗೊತ್ತೇ ಇಲ್ಲ ಎನ್ನುತ್ತಿದ್ದಾರೆ. ಸಚಿವರ ಈ ರೀತಿಯ ಹೇಳಿಕೆನೋಡಿದರೆ, ಬಹುಶಃ ಈ ಮರಗಳನ್ನು ಅವರು ತಮ್ಮ ಮನೆಗೇ ಸಾಗಿಸಿರುವ ಶಂಕೆ ಇದೆ ಎಂದು ಸಂಸದ ನಳಿನ್ಕುಮಾರ್ ಕಟೀಲು ಆರೋಪಿಸಿದ್ದಾರೆ.
ರಾಜ್ಯ ಸರಕಾರದ ಆಡಳಿತ ವೈಫಲ್ಯ ವಿರೋಧಿಸಿ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ವತಿಯಿಂದ ದ.ಕ. ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಅರಣ್ಯ ಸಚಿವರಿಗೆ ಅರಣ್ಯ ಎಲ್ಲಿದೆ ಎಂದೇ ಗೊತ್ತಿಲ್ಲ. ಹಾಗಾಗಿ, ಐಜಿಪಿ ಬಂಗ್ಲೆಯಿಂದ ಶ್ರೀಗಂಧ ಮರ ಕಳವು ಆಗಿರುವ ವಿಷಯವೂ ಗೊತ್ತಾಗಿಲ್ಲ. ಬಹುಶಃ ಅವರು ಈ ಮರಗಳನ್ನು ತಮ್ಮ ಮನೆಗೇ ಕೊಂಡೊಯ್ದಿರಬಹುದು. ಇಲ್ಲವಾಗಿದ್ದರೆ ಆರೋಪಿಗಳನ್ನು ಇಷ್ಟೊತ್ತಿಗೆ ಪತ್ತೆ ಮಾಡಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕಿತ್ತು ಎಂದು ಅವರು ಆರೋಪಿಸಿದರು.