ಮಂಗಳೂರು: ಮಳೆಯಿಂದಾಗಿ ಗೋಡೆ ಕುಸಿಯುತ್ತಿರುವ ಶಬ್ದ ಕೇಳಿ ಹೊರಗೆ ಧಾವಿಸಿದ್ದರಿಂದ ಮನೆಯಲ್ಲಿದ್ದ ಐವರು ಪವಾಡಸದೃಶವಾಗಿ ಪಾರಾದ ಘಟನೆ ಇಲ್ಲಿನ ಕಿನ್ಯ ಗ್ರಾಮ ಪಂಚಾಯತ್ನ ಮಿನಾದಿಯಲ್ಲಿ ಸಂಭವಿಸಿದ್ದು,
ಸುಮಾರು ಒಂದು ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ.ಪರಿಶಿಷ್ಟ ಸಮುದಾಯಕ್ಕೆ ಸೇರಿದ ಶ್ರೀನಿವಾಸ ಮತ್ತು ಭಾಗ್ಯಶ್ರೀ ದಂಪತಿಗೆ ಸೇರಿದ ಮನೆ ಇದಾಗಿದ್ದು, ನಸುಕಿನ ಜಾವ ಶಬ್ದ ಕೇಳಿ ಎಚ್ಚೆತ್ತಾಗ ಮನೆಯ ಪಾರ್ಶ್ವ ಕುಸಿಯುತ್ತಿರುವುದು ಕಂಡು ಬಂದಿದ್ದು, ಮನೆಯಲ್ಲಿದ್ದ ಶ್ರೀನಿವಾಸ ಮತ್ತು ಭಾಗ್ಯಶ್ರೀ ಹಾಗೂ ಮಕ್ಕಳಾದ ಸುಶಾಂತ್, ನಿಶಾಂತ್, ಶುಭಶ್ರೀ ಕೂಡಲೇ ಹೊರಗೆ ಓಡಿದ್ದರಿಂದ ಅಪಾಯದಿಂದ ಪಾರಾದರು.
ಮನೆಯ ಮೇಲ್ಛಾವಣಿ ಕುಸಿದು, ಗೋಡೆಗಳಲ್ಲಿ ಬಿರುಕುಂಟಾಗಿದೆ. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಶ್ರೀನಿವಾಸ್ ಕೂಲಿ ಕಾರ್ಮಿಕರಾಗಿದ್ದು, ಮೂರು ತಿಂಗಳ ಹಿಂದೆಯಷ್ಟೇ ಅವರ ತಾಯಿಯೂ ತೀರಿಕೊಂಡಿದ್ದರು. ಶ್ರೀನಿವಾಸ್ ಅವರಿಂದಲೇ ಕುಟುಂಬ ನಿರ್ವಹಣೆಯಾಗ ಬೇಕಾಗಿದೆ. ಓರ್ವ ಪುತ್ರ ಅಂಗವಿಕಲನಾಗಿದ್ದು, ಇಬ್ಬರು ಮಕ್ಕಳು ಶಾಲೆ ಕಲಿಯುತ್ತಿದ್ದಾರೆ. ಪ್ರಸ್ತುತ ಕುಟುಂಬ ಅತಂತ್ರ ಸ್ಥಿತಿಯಲ್ಲಿದೆ.