ಮಂಗಳೂರು: ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗಾಂಜಾ ಸಾಗಾಟ ಪ್ರಕರಣದ ಆರೋಪಿಯೊಬ್ಬ ಕಸ್ಟಮ್ಸ್ ಅಧಿಕಾರಿಗಳಿಂದ ತಪ್ಪಿಸಿಕೊಂಡು ಪರಾರಿಯಾದ ಘಟನೆ ನಡೆದಿದೆ. ವಿದೇಶಕ್ಕೆ ಗಾಂಜಾ ಸಾಗಿಸುತ್ತಿದ್ದ ಕೇರಳದ ಕಾಸರಗೋಡಿನ ಮಹಮ್ಮದ್ ಹನೀಫ್ ಎಂಬುವನನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದರು.
ದೋಹಾಕ್ಕೆ ತೆರಳಲು ಶುಕ್ರವಾರ ಮಂಗಳೂರು ನಿಮಾನ ನಿಲ್ದಾಣಕ್ಕೆ ಬಂದಿದ್ದ ಮಹಮ್ಮದ್ ಹನೀಫ್ ನ ಬ್ಯಾಗ್ ತಪಾಸಣೆ ನಡೆಸಿದಾಗ 3 ಪ್ಯಾಕೆಟ್ ನಲ್ಲಿ ಗಾಂಜಾ ಪತ್ತೆಯಾಗಿತ್ತು. ಬಂಧಿತ ಹನೀಫ್ ಬ್ಯಾಗ್ ನಿಂದ 4.820 ಕಿಲೋ ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿತ್ತು.ಆ ನಂತರ ಅಧಿಕಾರಿಗಳು ವಿಮಾನ ನಿಲ್ದಾಣದಲ್ಲಿರುವ ಕಸ್ಟಮ್ಸ್ ಕಚೇರಿಯ ಕೊಠಡಿಯೊಂದರಲ್ಲಿ ವಿಚಾರಣೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಇನ್ನೊಂದು ವಿಮಾನ ಬಂದ ಕಾರಣ ಮಹಮ್ಮದ್ ಹನೀಫ್ ನನ್ನು ಕೊಠಡಿಯಲ್ಲಿ ಬಿಟ್ಟು, ಕರ್ತವ್ಯಕ್ಕೆ ತೆರಳಿದ್ದಾರೆ. ಈ ಸಂದರ್ಭವನ್ನು ಉಪಯೋಗಿಸಿದ ಹನೀಫ್ ಚಾಣಾಕ್ಷತನದಿಂದ ಪರಾರಿಯಾಗಿದ್ದಾನೆ.ಹನೀಫ್ ಪರಾರಿಯಾಗುತ್ತಿರುವುದನ್ನು ವಿಮಾನ ನಿಲ್ದಾಣದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳಾ ಸಿಬ್ಬಂದಿ ಗಮನಿಸಿ, ಸಿಐಎಸ್ ಎಫ್ ಭದ್ರತಾ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಆದರೆ ಕಸ್ಟಮ್ಸ್ ಅಧಿಕಾರಿಗಳು ಎಚ್ಚತ್ತುಕೊಳ್ಳುವಷ್ಟರಲ್ಲಿ ಹನೀಫ್ ಪರಾರಿಯಾಗಿದ್ದಾನೆ.