ಮಂಗಳೂರು: 'ಮಂಗಳೂರು ದಸರಾ' ಎಂದೇ ಪ್ರಖ್ಯಾತಿ ಪಡೆದಿರುವ ಶ್ರೀ ಕ್ಷೇತ್ರ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಾಲಯದಲ್ಲಿ ಸೆಪ್ಟೆಂಬರ್ 21ರಂದು ದಸರಾ ಮಹೋತ್ಸವಕ್ಕೆ ಚಾಲನೆ ದೊರಕಲಿದೆ .ಶಾರದಾ ಮಾತೆ ಹಾಗೂ ನವದುರ್ಗೆಯರ ಪ್ರತಿಷ್ಠಾಪನೆಯೊಂದಿಗೆ ದಸರಾ ಮಹೋತ್ಸಕ್ಕೆ ಚಾಲನೆ ನೀಡಲಾಗುತ್ತದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಬಿ ಜನಾರ್ದನ ಪೂಜಾರಿ ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
"ಈ ಬಾರಿಯ ದಸರಾ ಸಿದ್ಧತೆ ಕುದ್ರೋಳಿಯಲ್ಲಿ ಭರದಿಂದ ಸಾಗಿದೆ. ರಾಷ್ಟ್ರಮಟ್ಟದಲ್ಲಿ ಎದ್ದು ಕಾಣುವಂತೆ ಈ ಬಾರಿ ದಸರಾ ಮೆರವಣಿಗೆ ಮಾಡಲಾಗುವುದು," ಎಂದು ಜನಾರ್ದನ ಪೂಜಾರಿ ತಿಳಿಸಿದರು.ಈ ಬಾರಿ ದಸರಾ ಮಹೋತ್ಸವಕ್ಕೆ ರಾಜ್ಯ ಸರ್ಕಾರದ ಸಚಿವರೊಬ್ಬರು ಚಾಲನೆ ನೀಡಲಿದ್ದಾರೆ ಎಂದು ಹೇಳಿದ ಅವರು ಸಚಿವರ ಹೆಸರು ಬಹಿರಂಗಪಡಿಸಲು ನಿರಾಕರಿಸಿದರು .ಸೆಪ್ಟೆಂಬರ್ 30 ರಂದು ಸಂಜೆ ಶ್ರೀ ಕ್ಷೇತ್ರದಿಂದ ಮಂಗಳೂರು ದಸರಾ ಮೆರವಣಿಗೆ ಹೊರಡಲಿದ್ದು ಶಾರದಾ ಮಾತೆ , ಮಹಾಗಣಪತಿ , ನವದುರ್ಗೆಯರ ಮೂರ್ತಿ ಸಹಿತ ರಾಜ್ಯದ ವಿವಿಧ ಭಾಗಳಿಂದ ಬರುವ 75 ಕ್ಕೂ ಅಧಿಕ ಕಲಾ ಪ್ರಕಾರಗಳು ಹಾಗೂ ಸ್ತಬ್ಧಚಿತ್ರಗಳು ಮೆರವಣಿಗೆಗೆ ಮೆರಗು ನೀಡಲಿವೆ ಎಂದು ಅವರು ಹೇಳಿದರು .