ಮಂಗಳೂರು: ಶಾಲಾ- ಕಾಲೇಜುಗಳ ದಸರಾ ರಜೆಯನ್ನು ಸರಕಾರ ಮಾರ್ಪಾಟುಗೊಳಿಸಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಯ ವಿದ್ಯಾರ್ಥಿಗಳಿಗೆ ಸೆ. 21ರಿಂದ ರಜೆ ಆರಂಭಗೊಳ್ಳಲಿದೆ.
ರಜೆ ಬದಲಾವಣೆ ಹಿನ್ನೆಲೆಯಲ್ಲಿ ಈ ಹಿಂದೆ ನಿಗದಿಯಾಗಿದ್ದ ಶೈಕ್ಷಣಿಕ ಪರೀಕ್ಷೆಗಳನ್ನು ರಜೆ ಬಳಿಕ ನಿರ್ಧರಿಸಲಾಗುವುದು ಎಂದು ಶಿಕ್ಷಣ ಇಲಾಖೆ ಸ್ಪಷ್ಟಪಡಿಸಿದೆ. ಬದಲಾದ ರಜಾ ದಿನಾಂಕಗಳು ರಾಜ್ಯ ಪಠ್ಯಕ್ರಮದ ಶಾಲೆಗಳಿಗೆ ಮಾತ್ರ ಅನ್ವಯವಾಗಲಿದೆ. ಕೇಂದ್ರ ಪಠ್ಯ ಕ್ರಮದ ಶಾಲೆಗಳ ದಸರಾ ರಜೆ, ಪರೀಕ್ಷೆಗಳು ಶಾಲಾ ಆಡಳಿತ ಮಂಡಳಿ ನಿಗದಿ ಪಡಿಸಿದಂತೆಯೇ ಇರಲಿದೆ. ಇನ್ನು, ರಾಜ್ಯ ಪಠ್ಯ ಕ್ರಮದ ಕೆಲವೊಂದು ಶಿಕ್ಷಣ ಸಂಸ್ಥೆಗಳು ಕ್ರಿಸ್ಮಸ್ ವೇಳೆಯೂ ವಾರ ಕಾಲ ರಜೆ ನೀಡಲಿವೆ. ಅಂತಹ ಸಂಸ್ಥೆಗಳು ಕೆಲ ದಿನ ಮುಂಚಿತವಾಗಿ ತರಗತಿ ಆರಂಭಿಸಲಿದ್ದು, ಸರಕಾರವೂ ಇದಕ್ಕೆ ಅವಕಾಶ ನೀಡಿದೆ