ಮಂಗಳೂರು: ಯಕ್ಷಗಾನದಲ್ಲಿ ತುಟಿಗೆ ತುಟಿ ಬೆಸೆವ ದೃಶ್ಯದಲ್ಲಿ ಕಾಣಿಸಿಕೊಂಡು, ಕಲೆಯ ಪಾವಿತ್ರ್ಯಕ್ಕೆ ಧಕ್ಕೆ ತಂದಿದ್ದಾರೆ ಎಂದು ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ಟೀಕೆಗೆ ಗುರಿಯಾದ ಇಬ್ಬರು ಕಲಾವಿದರು ಬೇಸತ್ತು ಯಕ್ಷ ರಂಗದಿಂದಲೇ ದೂರ ಸರಿಯುವ ನಿರ್ಧಾರ ಮಾಡಿದ್ದಾರೆ. ತಮ್ಮಿಂದ ಆಗದ ಅಪಚಾರಕ್ಕೆ ಹೊಣೆಗಾರರನ್ನಾಗಿ ಮಾಡಲಾಗಿದೆ ಎಂದು ಈ ಇಬ್ಬರು ಕಲಾವಿದರು ಬೇಸರ ವ್ಯಕ್ತಪಡಿಸಿದ್ದಾರೆ.
ಆದ್ದರಿಂದ ಕಟೀಲು ಐದನೇ ಮೇಳದ ದೇವಿ ವೇಷಧಾರಿ ಪ್ರಶಾಂತ್ ಶೆಟ್ಟಿ ನೆಲ್ಯಾಡಿ ಮತ್ತು ರಾಕೇಶ್ ರೈ ಅಡ್ಕ ಅವರು ಮುಂದೆ ವೇಷ ಧರಿಸದಿರಲು ನಿರ್ಧರಿಸಿದ್ದು, ಅಭಿಮಾನಿಗಳಲ್ಲಿ ನಿರಾಶೆ ಮೂಡಿಸಿದೆ.ಈಗಲೂ ಸಾಮಾಜಿಕ ಜಾಲತಾಣಗಳಲ್ಲಿ ಇವರ ವಿರುದ್ಧ ಟೀಕೆ ಮುಂದುವರಿದಿದೆ. ಇದರಿಂದ ನೊಂದಿರುವ ಪ್ರಶಾಂತ್ ಶೆಟ್ಟಿ ನೆಲ್ಯಾಡಿ, ಮುಂದೆ ಬಣ್ಣ ಹಚ್ಚದಿರಲು ನಿರ್ಧರಿಸಿದ್ದಾರೆ. ಎಷ್ಟೇ ಸ್ಪಷ್ಟನೆ ಕೊಟ್ಟರೂ ತಪ್ಪು ಗ್ರಹಿಕೆಯಿಂದ ಕಲಾವಿದರ ಅವಮಾನ ಮುಂದುವರೆದಿದ್ದು, ತೆಂಕುತಿಟ್ಟಿನ ಪ್ರಸಿದ್ಧ ಕಲಾವಿದರ ಯಕ್ಷ ಬದುಕನ್ನೇ ಕೊನೆಗೊಳಿಸಿದೆ.
ಅನಗತ್ಯ ಅಪಪ್ರಚಾರ ಸಲ್ಲದು; ಪಟ್ಲ ಸತೀಶ್ ಶೆಟ್ಟಿ
ಈ ವಿಚಾರವನ್ನು ದೊಡ್ಡದು ಮಾಡುವ ಅಗತ್ಯವಿಲ್ಲ .ಪ್ರಶಾಂತ್ ಶೆಟ್ಟಿ ನೆಲ್ಯಾಡಿ ಮತ್ತು ರಾಕೇಶ್ ರೈ ಅಡ್ಕ ಅವರು ಈ ಟೀಕೆಯನ್ನು ಗಣನೆಗೆ ತೆಗೆದುಕೊಳ್ಳದೆ ಯಕ್ಷಗಾನ ರಂಗದಲ್ಲಿ ಸೇವೆಯನ್ನು ಮುಂದುವರಿಸಬೇಕು. ಕಲಾವಿದರು ಹೀಗೆ ಮಾಡಿಲ್ಲ ಎಂದಾದರೆ. ಇದನ್ನು ದೊಡ್ಡದು ಮಾಡುವ ಅಗತ್ಯವಿಲ್ಲ ಎಂದು ಪಟ್ಲ ಸತೀಶ್ ಶೆಟ್ಟಿ ಅಭಿಪ್ರಾಯ ಪಟ್ಟಿದ್ದಾರೆ