ಶಂಖಚಕ್ರಧಾರಣೆ ಭಗವತ್ಭಕ್ತರ ದೀಕ್ಷೆಯಾಗಿದೆ : ವಿದ್ಯಾಧೀಶ ತೀರ್ಥಶ್ರೀ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಅ.01: ಸಂಸ್ಕೃತಿಯಲ್ಲಿ ಮುದ್ರಾಧಾರಣೆಗೆ ಬಹಳ ಮಹತ್ವತೆ ಇದೆ. ನಮಗೆ ಯಾರಾದರೂ ಏನಾದರೂ ಇನಾಮು ಕೊಟ್ಟರೆ ಅದನ್ನು ಮತ್ತು ಕೊಟ್ಟವರನ್ನು ನಾವು ಸ್ಮರಿಸಿ ಕೊಳ್ಳುತ್ತೇವೆ. ಅಂತೆಯೇ ಈ ಶರೀರ ದೇವರು ಕೊಟ್ಟ ಬಹುಮುಖ್ಯ ವರವಾಗಿದೆ. ಹಾಗಾಗಿ ದೇವರ ನೆನಪಿಗೋಸ್ಕರವಾಗಿ ಈ ಶರೀರದಲ್ಲಿ ದೇವರ ಶಂಖಚಕ್ರವನ್ನು ಹಾಕಿಕೊಳ್ಳುವ ಸಂಪ್ರದಾಯವೇ ತಪ್ತ ಮುದ್ರಾಧಾರಣೆ. ಮನುಷ್ಯರ ಪ್ರಯತ್ನ ವಿೂರಿನಿಂತ ಈ ಶರೀರ, ಇಂದ್ರೀಯಗಳು ಒಂದೊಂದೂ ಅಪೂರ್ವವಾದದು. ಈ ದೇಹಕ್ಕೆ ಶಂಖಚಕ್ರಧಾರಣೆ ಭಗವತ್ಭಕ್ತರ ದೀಕ್ಷೆಯಾಗಿದೆ. ಈ ಚಕ್ರಕ್ಕೆ ದುರ್ಗಾದೇವಿ ಅಭಿಮಾನಿ ದೇವತೆ. ದುರ್ಗೆ ಅಂದ್ರೆ ಅದು ಭದ್ರಕೋಟೆ. ಹಾಗಾಗಿ ಈ ಚಕ್ರಧಾರಣೆಯಿಂದ ದುರ್ಗೆಯ ಅನುಗ್ರಹವಾಗುತ್ತದೆ ಎಂದು ಉಡುಪಿ ಶ್ರೀ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ತಿಳಿಸಿದರು.
ಪಲಿಮಾರು ಸ್ವಾಮೀಜಿ ಅವರು ಇಂದಿಲ್ಲಿ ಆದಿತ್ಯವಾರ ಪೂರ್ವಾಹ್ನ ಸಾಂತಾಕ್ರೂಜ್ ಪೂರ್ವದ ಪ್ರಭಾತ್ ಕಾಲೋನಿ ಇಲ್ಲಿನ ಉಡುಪಿ ಪೇಜಾವರ ಮಠ ಮುಂಬಯಿ ಶಾಖೆಯ ಸನ್ನಿಧಿಯಲ್ಲಿನ ಶ್ರೀ ಕೃಷ್ಣ ದೇವರಿಗೆ ಪೂಜೆ ನೆರವೇರಿಸಿ ಪಾವಿತ್ರ್ಯತಾ ತಪ್ತ ಮುದ್ರಾಧಾರಣೆಗೈದು ನೆರೆದ ಭಕ್ತರಿಗೆ ಮಂತ್ರಾಕ್ಷತೆ, ಪ್ರಸಾದ ವಿತರಿಸಿ ಅನುಗ್ರಹಿಸಿ ನುಡಿದರು.
ಶಂಖಚಕ್ರ ಸುದರ್ಶನ ಮುದ್ರೆಯಾಗಿದ್ದು ಭಾವನೆ, ದೋಷಗಳ ಪರಿಹಾರಕ್ಕೆ ಸೂಕ್ತವಾದದ್ದು. ಹೋಮದಲ್ಲಿ ಶಂಖಚಕ್ರ ಬಿಸಿಮಾಡಿ ದೇಹದಲ್ಲಿ ಹಚ್ಚಿಸಿಕೊಳ್ಳುವ ಒಳ್ಳೆಯ ಸಂಪ್ರದಾಯವಾಗಿ ನಮ್ಮಲ್ಲಿ ಬೆಳೆದು ಬಂದ ಸಂಸ್ಕೃತಿ ಇದಾಗಿದೆ. ಯುವ ಪೀಳಿಗೆಯಲ್ಲಿ ಇಂತಹ ಪದ್ಧತಿ, ಸಂಸ್ಕೃತಿ ತಿಳಿಸಿ ಕೊಡುವ ಕೊರತೆ ನಮ್ಮಲ್ಲಿದೆ. ಅಜ್ಜಅಜ್ಜಿ, ಪೂರ್ವಜರಿಂದ ದೂರವಾಗಿ ಆಧುನಿಕ ಜೀವನದೊಡನೆ ಬೆರೆತುಕೊಂಡು ಇಂತಹ ಪಾವಿತ್ರ್ಯತೆ, ಸಂಪ್ರದಾಯಿಕ ಪದ್ಧತಿಗಳಿಂದ ದೂರ ಸರಿಯುವ ನವಪೀಳಿಗೆಯನ್ನು ಮತ್ತೆ ಸಮೀಪಿಸುವ ಅಗತ್ಯವಿದೆ. ಕೂಡುಕುಟುಂಬದಿಂದ ದೂರ ಸರಿದು ಬೇರೆಬೇರೆಗೊಂಡು ಇವತ್ತು ವಿಭಕ್ತ ಕುಟುಂಬಗಳಾಗಿ ಬಾಳುವ ಈ ಕಾಲದಲ್ಲಿ ಇಂತಹ ದೋಷದಿಂದ ಯುವಜನಾಂಗ ಇಂತಹ ಸಂಸ್ಕಾರಗಳಿಂದ ದೂರ ಸರಿದಿದೆ. ಶಾಲಾ ಕಾಲೇಜುಗಳಲ್ಲಿ ಧಾರ್ಮಿಕ ವಿಚಾರದ ಕೊರತೆ, ಮಾಧ್ಯಮಗಳು ತಿಳಿಸುವಂತಹದ್ದು ಎಷ್ಟು ಪರಿಣಾಮಕಾರಿ ಅನ್ನುವುದು ಸವಲಾಗಿದೆ ಎಂದೂ ಪಲಿಮಾರುಶ್ರೀ ಎಂದರು.
ಈ ಸಂದರ್ಭದಲ್ಲಿ ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನದ ಗೌರವ ಕೋಶಾಧಿಕಾರಿ ಅವಿನಾಶ್ ಶಾಸ್ತ್ರಿ, ಕಾರ್ಯಕಾರಿ ಸಮಿತಿ ಸದಸ್ಯ ರಾಮ ವಿಠಲ ಕಲ್ಲೂರಾಯ, ಪೇಜಾವರ ಮಠ ಮುಂಬಯಿ ಶಾಖೆಯ ಪ್ರಬಂಧಕರುಗಳಾದ ಪ್ರಕಾಶ ಆಚಾರ್ಯ ರಾಮಕುಂಜ, ರಾಮದಾಸ ಉಪಾಧ್ಯಾಯ ರೆಂಜಾಳ, ಹರಿ ಭಟ್, ನಿರಂಜನ್ ಗೋಗ್ಟೆ, ರಾಘವೇದ್ರ ಭಟ್, ಡಾ| ಎಸ್.ಎಂ ಆಳ್ವ (ಪ್ರಭಾದೇವಿ), ಕರುಣಾಕರ ಶೆಟ್ಟಿ (ಇಸ್ಕಾನ್), ಲತೀಶ್ ಶೆಟ್ಟಿ (ಗೋಕುಲ), ಡಾ| ಬಾಲಕೃಷ್ಣ ಆಳ್ವ, ಡಾ| (ಶ್ರೀಮತಿ) ಶೈರಿ ಬಿ.ಆಳ್ವ ಸೇರಿದಂತೆ ನೂರಾರು ಭಕ್ತರು ಆಗಮಿಸಿ ಮುದ್ರಾಧಾರಣೆ ಹಚ್ಚುಸಿಕೊಂಡರು. ಮಾ| ಕೃಷಾಂಗ್ ಆಳ್ವ ಶ್ಲೋಕ ಪಠಿಸಿದರು.
ಮುಂಬರುವ 2018-2020ರ ಉಡುಪಿ ಪರ್ಯಾಯ ಪೀಠವನ್ನೇರಲಿರುವ ಪರ್ಯಾಯ ಸಂಚಾರಕ್ಕೆ ಮುಂಬಯಿ ಮಹಾನಗರಕ್ಕಾಗಮಿಸಿದ ಶ್ರೀ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಇಂದು (ಅ.01) ಸೋಮವಾರ ಮತ್ತು ನಾಳೆ ಮಂಗಳವಾರ ದಿನಪೂರ್ತಿಯಾಗಿ ಇಲ್ಲಿದ್ದು ವಿವಿಧ ಪೂಜೆಗಳನ್ನು ನಡೆಸಿ ನೆರೆದ ಭಕ್ತಾಭಿಮಾನಿಗಳಿಗೆ ಮಂತ್ರಾಕ್ಷತೆ ನೀಡಿ ಅನುಗ್ರಹಿಸಲಿದ್ದಾರೆ. ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮ ಗಳಲ್ಲಿ ನಾಡಿನ ಸಮಸ್ತ ಭಕ್ತಾಭಿಮಾನಿಗಳು ಸಹಭಾಗಿಗಳಾಗಿ ಶ್ರೀಕೃಷ್ಣ ದೇವರ ಕೃಪೆಗೆ ಪಾತ್ರರಾಗುವಂತೆ ಶಾಖಾ ಹಿರಿಯ ಪ್ರಬಂಧಕ ಪ್ರಕಾಶ ಆಚಾರ್ಯ ರಾಮಕುಂಜ ತಿಳಿಸಿದ್ದಾರೆ.