ಮಂಗಳೂರು : ಶ್ರೀ ಕ್ಷೇತ್ರ ಕಟೀಲು ಶ್ರೀದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ 6 ಯಕ್ಷಗಾನ ಮೇಳಗಳ ತಿರುಗಾಟಕ್ಕೆ ಚಾಲನೆ ನೀಡಲಾಗಿದೆ. 2017-18 ನೇ ಸಾಲಿನ ಶ್ರೀ ಕ್ಷೇತ್ರದ ಸೇವೆ ಬಯಲಾಟಗಳ ತಿರುಗಾಟ ಆರಂಭಗೊಂಡಿದೆ.ಶ್ರೀ ಕ್ಷೇತ್ರ ಕಟೀಲಿನ ಅರ್ಚಕ ಅನಂತಪದ್ಮನಾಭ ಅಸ್ರಣ್ಣ 6 ಮೇಳಗಳ ಕಲಾವಿದರಿಗೆ ಗೆಜ್ಜೆ ನೀಡುವ ಮೂಲಕ ಮೇಳಗಳ ತಿರುಗಾಟಕ್ಕೆ ಚಾಲನೆ ನೀಡಿದರು.
ಶ್ರೀ ಕ್ಷೇತ್ರ ಕಟೀಲಿನಲ್ಲಿ ನಿನ್ನೆ ಸಂಜೆ ಶ್ರೀ ದುರ್ಗಾಪರಮೇಶ್ವರಿಯ ಸನ್ನಿಧಾನದಲ್ಲಿ ಗೆಜ್ಜೆ ಮುಹೂರ್ತ ನಡೆದು ಎಲ್ಲಾ 6 ಮೇಳಗಳ ಹನ್ನೆರಡು ಮಂದಿ ವೇಷಧಾರಿಗಳು ಭಾಗವತಿಕೆ ಹಿಮ್ಮೇಳಗಳ ಸಹಿತ ಯಕ್ಷ ನಾಟ್ಯ ಪ್ರದಕ್ಷಿಣೆ, ಗಣಪತಿ ಸನ್ನಿಧಿಯಲ್ಲಿ ಯಕ್ಷಗಾನ ನಾಟ್ಯ ಸೇವೆ ನಡೆಸಿದರು. ಕ್ಷೇತ್ರದ 6 ಮೇಳಗಳ ದೇವರ ಪೆಟ್ಟಿಗೆ ಚಿನ್ನ, ಬೆಳ್ಳಿಯ ಕಿರೀಟ ಹಾಗೂ ಆಯುಧಗಳನ್ನು ದೇವಸ್ಥಾನದಲ್ಲಿ ಪೂಜಿಸಿ ಬಳಿಕ ಸರಸ್ವತಿ ಸದನದಲ್ಲಿನ ಚೌಕಿಯಲ್ಲಿ ಪೂಜೆ ಸಲ್ಲಿಸಲಾಯಿತು.
6 ಯಕ್ಷಗಾನ ಮೇಳಗಳ ತಿರುಗಾಟ ಆರಂಭದ ಮೊದಲ ಹಂತವಾಗಿ ಕ್ಷೇತ್ರದ ರಥಬೀದಿಯಲ್ಲಿ ನಿರ್ಮಿಸಲಾಗಿದ್ದ 6 ಯಕ್ಷ ರಂಗಗಳಲ್ಲಿ ಸೋಮವಾರ ರಾತ್ರಿ ಬಯಲಾಟ ಪ್ರದರ್ಶನ ನಡೆಯಿತು.ಯಕ್ಷಗಾನ ರಂಗದ ಖ್ಯಾತ ಭಾಗವತ ಪಟ್ಲ ಸತೀಶ್ ಶೆಟ್ಟಿ ಶ್ರೀ ಕ್ಷೇತ್ರದ ಮೇಳದಲ್ಲಿ ಸೇವೆ ಸಲ್ಲಿಸಲಿದ್ದಾರೆ. ಶ್ರೀ ಕ್ಷೇತ್ರ ಕಟೀಲಿನ 4 ನೇ ಮೇಳದಲ್ಲಿ ಹಿರಿಯ ಭಾಗವತರಾಗಿ ಪಟ್ಲ ಸತೀಶ್ ಶೆಟ್ಟಿ ಸೇವೆ ಸಲ್ಲಿಸಲಿದ್ದಾರೆ