ಮಂಗಳೂರು: ರಾಜ್ಯ ಸರಕಾರದ ಪ್ರತಿಷ್ಠಿತ ಯೋಜನೆಯಾಗಿರುವ ಮತ್ತು ಬೆಂಗಳೂರಿನಲ್ಲಿ ಈಗಾಗಲೇ ಯಶಸ್ವಿಯಾಗಿರುವ 'ಇಂದಿರಾ ಕ್ಯಾಂಟೀನ್' ಮಂಗಳೂರಿನ 5 ಕಡೆಗಳಲ್ಲಿ ಜನವರಿ ಒಂದರಿಂದ ಕಾರ್ಯಾರಂಭಗೊಳ್ಳಲಿದೆ. ಮುಂದಿನ ವಾರದಿಂದ ಇದರ ಕಾಮಗಾರಿ ಆರಂಭಿಸಲಾಗುವುದು ಎಂದು ಮೇಯರ್ ಕವಿತಾ ಸನಿಲ್ ಹೇಳಿದರು.
ಪಾಲಿಕೆಯ ತಮ್ಮ ಕೊಠಡಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕ್ಯಾಂಟೀನ್ಗಳಲ್ಲಿ ಬೆಳಗಿನ ಉಪಾಹಾರ 5 ರೂ. ಮತ್ತು ಮಧ್ಯಾಹ್ನ ಹಾಗೂ ರಾತ್ರಿಯ ಊಟ 10 ರೂ.ಗಳಲ್ಲಿ ಲಭ್ಯವಾಗಲಿದೆ. ಪಾಲಿಕೆಯ 5,93,291 ಜನಸಂಖ್ಯೆಯ ಆಧಾರದಲ್ಲಿ 6 ಕ್ಯಾಂಟೀನ್ ಹಾಗೂ ಅಡುಗೆ ಕೋಣೆಯನ್ನು ಆರಂಭಿಸಲು ನಿರ್ದೇಶಿಸಲಾಗಿದೆ. ಈ ಪೈಕಿ ಒಂದು ಕ್ಯಾಂಟೀನ್ ಉಳ್ಳಾಲ ನಗರ ಸಭೆಯ ವ್ಯಾಪ್ತಿಯಲ್ಲಿ ಆರಂಭವಾಗಲಿದೆ ಎಂದರು.
ಇಂದಿರಾ ಕ್ಯಾಂಟೀನ್ಗೆ ಸಂಬಂದಿಸಿದ ಕಟ್ಟಡಗಳನ್ನು ಕಂದಾಯ ಇಲಾಖೆ, ನಗರ ಸ್ಥಳೀಯ ಸಂಸ್ಥೆ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ವಿದ್ಯುತ್ ಕಂಪೆನಿ, ಪೊಲೀಸ್ ಇಲಾಖೆ ಹಾಗೂ ಇತರ ಸರಕಾರಿ ಸಂಸ್ಥೆಗಳಿಗೆ ಸಂಬಂಧಿಸಿದ ಜಾಗದಲ್ಲಿ ಭೂಮಿ ವರ್ಗಾವಣೆ ಪ್ರಕ್ರಿಯೆ ಇಲ್ಲದೆ ನಿರ್ಮಿಸಲು ಅನುಮತಿಸಲಾಗಿದೆ. ಎಲ್ಲ ಕಟ್ಟಡಗಳನ್ನು ಕೆಆರ್ಐಡಿಎಲ್ ಮೂಲಕ 2.97 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗವುದು. ಕ್ಯಾಂಟೀನ್ಗಳ ಅನುಷ್ಠಾನ ಹಾಗೂ ಅನಂತರದ ಕಾರ್ಯನಿರ್ವಹಣೆ, ಮೇಲ್ವಿಚಾರಣೆ ಯನ್ನು ದ.ಕ.ಜಿಲ್ಲಾಧಿಕಾರಿ ಅಧ್ಯಕ್ಷತೆಯ ಸಮಿತಿ ನಿರ್ವಹಿಸಲಿದೆ ಎಂದು ಅವರು ಮಾಹಿತಿ ನೀಡಿದರು.