ಮಂಗಳೂರು: ಪತ್ನಿಯ ಹೆಸರಿನಲ್ಲಿ ಅಕ್ರಮ ಆಸ್ತಿ ಹಾಗೂ ಸರಕಾರಿ ಭೂಮಿ ಕಬಳಿಕೆ ಕುರಿತ ಆರೋಪಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ ರೈ ತಿರುಗೇಟು ನೀಡಿದ್ದಾರೆ.ಕಾಂಗ್ರೆಸ್ ಉಚ್ಚಾಟಿತ ಮುಖಂಡ, ಇತ್ತೀಚೆಗಷ್ಟೇ ಬಿಜೆಪಿ ಸೇರಿದ್ದ ಹರಿಕೃಷ್ಣ ಬಂಟ್ವಾಳ್ ರೈ ವಿರುದ್ಧ ಭೂ ಅಕ್ರಮದ ಆರೋಪ ಮಾಡಿದ್ದರು.
ಹರಿಕೃಷ್ಣ ಬಂಟ್ವಾಳ್ ಆರೋಪಕ್ಕೆ ದಾಖಲೆ ಸಮೇತ ಸ್ವಷ್ಟನೆ ನೀಡಿದ ಸಚಿವ ರಮಾನಾಥ ರೈ, 'ರಾಜಕೀಯ ಪ್ರೇರಿತವಾಗಿ ಹರಿಕೃಷ್ಣ ಬಂಟ್ವಾಳ ತನ್ನ ವಿರುದ್ಧ ಆರೋಪ ಮಾಡಿದ್ದಾರೆ' ಎಂದು ಕಿಡಿಕಾರಿದರು.ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ನನ್ನ ಬಳಿ ಅಕ್ರಮ ಭೂಮಿ ಇಲ್ಲ. ಪಿತ್ರಾರ್ಜಿತ ಭೂಮಿಯಷ್ಟೆ ಇರುವುದು," ಎಂದು ಹೇಳಿ ದಾಖಲೆ ಬಿಡುಗಡೆ ಮಾಡಿದರು.
ಹರಿಕೃಷ್ಣ ಬಂಟ್ವಾಳ ಅವರು ಅಕ್ರಮ ಭೂ ಕಬಳಿಕೆ ಎಂದು ಹೇಳಿರುವ 8 ಎಕ್ರೆ ರಬ್ಬರ್ ತೋಟ ಪಟ್ಟಾ ಭೂಮಿಯಲ್ಲಿದೆ ಎಂದು ಹೇಳಿದರು.ಸದ್ರಿ ಜಾಗದ ದಾಖಲೆ ಪತ್ರ ನನ್ನಲ್ಲಿದೆ ಎಂದು ಹೇಳಿದ ಅವರು "ಪತ್ನಿ ಧನಭಾಗ್ಯ ಹೆಸರಲ್ಲಿರುವ ಮಾಣಿಯ 3 ಎಕ್ರೆ ಕುಮ್ಕಿ ಭೂಮಿ ಅವರ ಕುಟುಂಬದ್ದಾಗಿದೆ. ಕುಮ್ಕಿ ಭೂಮಿಯನ್ನು ಆಕೆಯ ತಂದೆಯವರೇ ಮಗಳ ಹೆಸರಿಗೆ ಮಾಡಿಕೊಟ್ಟಿದ್ದಾರೆ," ಎಂದು ಸ್ಪಷ್ಟಪಡಿಸಿದರು.